ಸೆ.10ರಿಂದ ಶಿವಮೊಗ್ಗದಲ್ಲಿ ಕನ್ನಡ ಸೊಗಡಿನ ಸುಗ್ಗಿ
ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗ ಕನ್ನಡ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆ.10ರಿಂದ 13ರವರೆಗೆ 'ಕನ್ನಡ ಸೊಗಡಿನ ಸುಗ್ಗಿ' ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಸಹೋದರ ಭಾಷೆಯಾದ ತುಳು, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳನ್ನು ಉಳಿಸಲು ಮುಂದಾಗಬೇಕು. ಯೂನಿಸೆಫ್ ವರದಿಯಂತೆ ಪ್ರಪಂಚದಲ್ಲಿ 15 ದಿನಕ್ಕೆ ಒಂದರಂತೆ ಒಂದು ಭಾಷೆ ನಶಿಸುತ್ತಿದೆ. ಇದೇ ರೀತಿ ಮುಂದುವರೆದರೆ 30-40 ವರ್ಷದಲ್ಲಿ ಜಗತ್ತಿನ ಶೇ.70ರಷ್ಟು ಭಾಷೆಗಳೇ ಅಳಿಸಿಹೋಗುವುದಾಗಿ ವರದಿಯಾಗಿದೆ. ಇಂದು ವಿಶ್ವದಲ್ಲಿ 6ಸಾವಿರ ಭಾಷೆಯಿದ್ದು, ಅದರಲ್ಲಿ ಶೇ.50ಕ್ಕೂ ಹೆಚ್ಚು ಭಾರತದಲ್ಲಿಯೇ ಇದೆ. ನಮ್ಮ ರಾಜ್ಯದಲ್ಲಿ 300ರಿಂದ 400ರಷ್ಟು ಭಾಷೆಗಳಿದ್ದು, ಅವುಗಳಲ್ಲಿ ಕೆಲವು ಪ್ರಚಲಿತವನ್ನೇ ಕಳೆದುಕೊಂಡಿದೆ ಎಂದರು.
ಇಲ್ಲಿರುವ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಕಲಾತಂಡಗಳನ್ನು ಕರೆಸಿ, ಜಾನಪದ ಜಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದರು.
ಸೆ.10ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಸಿದ್ದಲಿಂಗಯ್ಯ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೋರೂರು ಚನ್ನಬಸಪ್ಪ ಉಪಸ್ಥಿತರಿರುವರು. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮವು ನಗರದ ಪ್ಯಾಸಿಟ್ ಕಾಲೇಜಿನಲ್ಲಿ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ನಾ.ಡಿಸೋಜ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಮಂಜುನಾಥ್, ಬಿಜೆಪಿಯ ಜಿಲ್ಲಾಧ್ಯಕ್ಷ ಗಿರೀಶ್ಪಟೇಲ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ದತ್ತಾತ್ರಿ, ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.