ಕನ್ನಡ ಸಂಘಟನೆಗಳಿಂದ ಸುಪ್ರಿಂಕೋರ್ಟ್ ಗೆ ಮೊರೆ
ಇಂದು ಬೆಳಗ್ಗೆ ಗಡಿರಕ್ಷಣಾ ವೇದಿಕೆಯ ವಾಟಾಳ್ ನಾಗರಾಜ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಸಾವಿರಾರು ಕನ್ನಡಪರ ಕಾರ್ಯಕರ್ತರು ಕೆಂಪೇಗೌಡ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಪ್ರತಿಭಟನೆಯುದ್ದಕ್ಕೂ ಸರಕಾರ ಹಾಗೂ ಯಡಿಯೂರಪ್ಪ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿ ಬೆಂಗಳೂರಿನಲ್ಲಿ ಅಗಸ್ಟ್ 9 ರಂದು ಸರಕಾರ ಉದ್ದೇಶಿಸಿರುವ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ ತಡೆಯಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಾವಿರಾರು ಕನ್ನಡಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಮಾತನಾಡಿದ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ತಿರುವಳ್ಳುವರ್ ವಿಚಾರದಲ್ಲಿ ಹೈಕೋರ್ಟ್ ತೆಳೆದಿರುವ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಿರುವಳ್ಳುವರ್ ಪ್ರತಿಮೆ ಅನಾವರಣ ತಡೆಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ದೂರಿದರು. ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿಸಿ ಕನ್ನಡಪರ ಸಂಘಟನೆಗಳು ಆಚರಿಸಲು ಉದ್ದೇಶಿಸಿರುವ ಬೆಂಗಳೂರು ಬಂದ್ ನಡಿದೇ ನಡೆಯುತ್ತೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಗೋಲಿಬಾರ್ ಆಗಲಿ, ಇನ್ನೊಂದು ಆಗಲಿ, ಯಡಿಯೂರಪ್ಪ ಅವರ ಸರಕಾರ ನೀಡಿರುವ ಬೆದರಿಕೆಗೆ ಬಗ್ಗುವುದಿಲ್ಲ ಎಂದು ವಾಟಾಳ್ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಯಾವೂರ ಸೀಮೆ ಮುಖ್ಯಮಂತ್ರಿ : ನಾರಾಯಣಗೌಡ
ತಿರುವಳ್ಳುವರ್ ಪ್ರತಿಮೆ ಅನಾವರಣದ ಅಮಂತ್ರಣದ ಪತ್ರಿಕೆಯನ್ನು ತಮಿಳು ಭಾಷೆಯಲ್ಲಿ ಮುದ್ರಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜೆಸಿ ರಸ್ತೆಯ ಕನ್ನಡ ಭವನದ ಆವರಣದಲ್ಲಿ ಪ್ರತಿಭಟನೆಯಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ತಮಿಳು ಆಹ್ವಾನ ಪತ್ರಿಕೆಯನ್ನು ಸುಟ್ಟು ಭಸ್ಮ ಮಾಡಲಾಯಿತು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ಟಿ ಎ ನಾರಾಯಣಗೌಡ, ಯಡಿಯೂರಪ್ಪ ಯಾವೂರ ಸೀಮೆಯ ಕನ್ನಡದ ಮುಖ್ಯಮಂತ್ರಿ. ತಿರುವಳ್ಳುವರ್ ಪ್ರತಿಮೆ ಆನಾವರಣವೇ ದೊಡ್ಡ ಅನ್ಯಾಯ. ಇದರೊಂದಿಗೆ ಆಹ್ವಾನ ಪತ್ರಿಕೆಯನ್ನು ತಮಿಳಿನಲ್ಲಿ ಮುದ್ರಿಸಿರುವುದು ಐದು ಕೋಟಿ ಕನ್ನಡಿಗರಿಗೆ ಮಾಡಿರುವ ಮೋಸ. ನಿಮ್ಮನ್ನು ನಿಮ್ಮ ಸರಕಾರವನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)