ರೆಡ್ಡಿಗಳ ಋಣಕ್ಕೆ ಬಿದ್ದ ಚಡ್ಡಿ ಸರ್ಕಾರ: ದೇಶಪಾಂಡೆ
ಬೆಂಗಳೂರು, ಜೂ. 19: ಬಳ್ಳಾರಿ ಗಣಿ ಧಣಿಗಳ ವಿರುದ್ಧ ಹೇರಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಮೂಲಕ ರಾಜ್ಯ ಸರ್ಕಾರ ರೆಡ್ಡಿ ಸೋದರರ ಋಣ ತೀರಿಸ ಹೊರಟಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ರಾಜ್ಯ ಕಾಂಗ್ರೆಸ್ ಮುಖಂಡರಾದ ಆರ್ ವಿ ದೇಶಪಾಂಡೆ ಹಾಗೂ ವಿ ಎಸ್ ಉಗ್ರಪ್ಪ ಗುಡುಗಿದ್ದಾರೆ.
ವಿವಾದಿತ ಓಬಳಾಪುರಂ ಗಣಿವ್ಯಾಪ್ತಿಯಲ್ಲಿರುವ ಸುಮಾರು ಎರಡು ಶತಮಾನದಷ್ಟು ಹಳೆಯದಾದ ಐತಿಹಾಸಿಕ ಸುಗ್ಗಲಮ್ಮ ದೇವಸ್ಥಾನ ನೆಲಸಮ ಪ್ರಕರಣ ವಾಪಾಸ್ ಪಡೆದಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ, ಇದು ರಾಮನಿಗೊಂದು ನ್ಯಾಯ ಬಳ್ಳಾರಿಗೊಂದು ನ್ಯಾಯ ಎಂಬಂತಾಗಿದೆ. ರಾಮಮಂದಿರ, ಹಿಂದುತ್ವದ ಹೆಸರಲ್ಲಿ ಮತಯಾಚನೆ ಮಾಡುವ ಪಕ್ಷ, ಈ ರೀತಿ ಅನ್ಯಾಯಕ್ಕೆ ಮುಂದಾಗಿರುವುದು ನಾಚಿಕೆಗೇಡು ಎಂದು ಜರಿದರು. ಸರ್ಕಾರಕ್ಕೆ ಕಾನೂನಿನ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಕೋರ್ಟ್ ಮೆಟ್ಟಿಲೇರಿರುವ ಪ್ರಕರಣಗಳನ್ನು ಖಲಾಸ್ ಮಾಡಿದೆ ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಗಳ ಮಾತಿಗೂ ಬೆಲೆ ಕೊಟ್ಟಿಲ್ಲ ಎಂದರು.
ಆಸ್ಪತ್ರೆಗಳನ್ನು ಉಳಿಸಿ
ತ್ಯಾಜ್ಯ ವಸ್ತು ನಿರ್ವಹಣೆ , ಮಾಲಿನ್ಯದ ನೆಪಮಾಡಿ, ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಬಂದ್ ಮಾಡಲು ಲೋಕ್ ಅದಾಲತ್ ನೀಡಿರುವ ಆದೇಶವನ್ನು ಪುನಃ ಪರಿಶೀಲಿಸಬೇಕು. ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಆದೇಶ ಹಿಂದಕ್ಕೆ ಪಡೆಯುವಂತೆ ಮಾಡುವುದು ಸೂಕ್ತ, ಇದರಿಂದ ಅನೇಕ ಬಡ ರೋಗಿಗಳಿಗೆ ನೆರವಾಗುವುದು ಎಂದು ದೇಶಪಾಂಡೆ ಹೇಳಿದರು.
ಉಗ್ರಪ್ಪ ಗುಡುಗು
ಒತ್ತಡ ತಂತ್ರಕ್ಕೆ ಬಲಿಯಾಗಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ಗಣಿಧಣಿಗಳ ಅಣತಿಯಂತೆ ಸರ್ಕಾರ ನಡೆಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ರೈತರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯದೆ, ಕೇವಲ ರೆಡ್ಡಿ ಬೆಂಬಲಿಗರನ್ನು ಓಲೈಸಿ ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಹೊರಟಿರುವುದು ನಾಚಿಕೆಗೇಡು ಎಂದು ಉಗ್ರಪ್ಪ ಕಿಡಿಕಾರಿದರು.
(ದಟ್ಸ್ ಕನ್ನಡವಾರ್ತೆ)











Click it and Unblock the Notifications