ಜಾಹಿರಾತು ಫಲಕಗಳಿಗೆ ಕಡಿವಾಣ : ಮಣಿವಣ್ಣನ್
ಮೈಸೂರು ನಗರವು ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರವಾಗಿದ್ದು , ಸಾಂಸ್ಕೃತಿಕ ನಗರಿ ಹಾಗೂ ಪಾರಂಪಕರಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಮ್ಯ ಪ್ರಕೃತಿ, ಪಾರಂಪರಿಕ ಕಟ್ಟಡಗಳು, ಉದ್ಯಾನವನಗಳು ಹಾಗೂ ಪಾರಂಪರಿಕ ವೃತ್ತಗಳು, ನಗರದ ಸೌಂದರ್ಯಕ್ಕೆ ಪ್ರತೀಕವಾಗಿದೆ. ಮೈಸೂರು ನಗರದ ಸೌಂದರ್ಯ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.
ಮೈಸೂರು ನಗರದ ಫ್ಲೆಕ್ಸ್ ಮತ್ತು ವಿನೈಲ್ ಜಾಹಿರಾತು ಫಲಕಗಳನ್ನು ಬೀದಿ ದೀಪದ ಕಂಬಗಳು, ವೃತ್ತಗಳು, ಪಾರಂಪರಿಕ ವಲಯಗಳಲ್ಲಿ ಅಳವಡಿಸುತ್ತಿರುವುದು ಕಂಡುಬಂದಿದೆ. ಮೈಸೂರು ನಗರಪಾಲಿಕೆ ಕೌನ್ಸಿಲ್ನಲ್ಲಿಯೂ ಸಹ ಪಾರಂಪರಿಕ ರಸ್ತೆಗಳು, ವೃತ್ತಗಳಲ್ಲಿ ಜಾಹಿರಾತುಗಳನ್ನು ಅಳವಡಿಸುವುದನ್ನು ನಿಷೇಧಿಸಿರುತ್ತದೆ. ಕಳೆದ ಎರಡು ದಿನಗಳಿಂದ ಕಂಡುಬಂದಿರುವ ಅನೇಕ ಫ್ಲೆಕ್ಸ್ ಮತ್ತು ವಿನೈಲ್ ಬೋರ್ಡ್ಗಳು ನಗರದ ಸೌಂದರ್ಯಕ್ಕೆ ಕುಂದುಂಟಾಗುವ ರೀತಿಯಲ್ಲಿ ಎಲ್ಲೆಂದರಲ್ಲಿ ಅಳವಡಿಸಲಾಗಿದ್ದು, ಈ ಫ್ಲೆಕ್ಸ್ ಮತ್ತು ವಿನೈಲ್ ಜಾಹಿರಾತು ಫಲಕಗಳಿಗೆ ಮೈಸೂರು ಮಹಾನಗರ ಪಾಲಿಕೆಯಿಂದ ಅನುಮತಿಸಲಾಗಿದ್ದರೆ, ಅದರ ಅನುಮತಿ ಪಡೆದವರ ವಿವರ, ಅನುಮತಿಸಿದ ಸ್ಥಳ, ಅನುಮತಿಸಲಾದ ಫಲಕದ ಸಂಖ್ಯೆ ಮುಂತಾದ ವಿವರ ಸಲ್ಲಿಸುವುದು.
ಅನುಮತಿ ನೀಡಿಲ್ಲದಿದ್ದರೆ ಇಂತಹ ಅನಧಿಕೃತವಾದ ಫ್ಲೆಕ್ಸ್ ಮತ್ತು ವಿನೈಲ್ ಫಲಕಗಳಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಜರೂರಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ. ಮಣಿವಣ್ಣನ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)