ಈಶ್ವರಪ್ಪ ತಲೆದಂಡಕ್ಕೆ ಆರ್ಎಸ್ಎಸ್ ಓಕೆ !!
ಸ್ವತಂತ್ರವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಸರಕಾರದ ಆಡಳಿತ ನಿರ್ವಹಣೆಯ ಬಗ್ಗೆ ಆರ್ಎಸ್ಎಸ್ ಕಾಳಜಿ ವಹಿಸುತ್ತದೆ. ಬಿಜೆಪಿಯ ಹೆಚ್ಚಿನ ಶಾಸಕರು ಮತ್ತು ಸಚಿವರು ಆರ್ಎಸ್ಎಸ್ ತತ್ವ ಸಿದ್ದಾಂತವನ್ನು ಪಾಲಿಸಿಕೊಂಡು ಬಂದವರು. ರಾಜ್ಯ ಸರಕಾರದ ಸಚಿವರ ಕಾರ್ಯನಿರ್ವಹಣೆಯ ಮೇಲೆ ನಿಗಾ ಇರಿಸಿರುವ ಆರ್ಎಸ್ಎಸ್, ಕಳೆದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಸಚಿವರ ಇಲಾಖೆಯಲ್ಲಾದ ಅಭಿವೃದ್ದಿಯನ್ನು ಗಮನಿಸಿ ಅರ್ಹತಾ ಅಂಕವನ್ನು ನೀಡುತ್ತದೆ.
ಆರ್ಎಸ್ಎಸ್ ನ ಈ ಸಿದ್ದಾಂತದ ಪ್ರಕಾರ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗ್ರಾಮೀಣಾಭಿವ್ರದ್ದಿ ಸಚಿವೆ ಶೋಭಾ ಕರಂದ್ಲಾಜೆ ಮೊದಲ ಸ್ಥಾನದಲ್ಲಿದ್ದರೆ ಇಂಧನ ಸಚಿವ ಈಶ್ವರಪ್ಪ 11ನೇ ಸ್ಥಾನದಲ್ಲಿದ್ದಾರೆ. ಅದಲ್ಲದೆ ಈಶ್ವರಪ್ಪ ಪಕ್ಷದ ವಿಕಾಸ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳದೇ ಇದ್ದುದು, ಇತ್ತೀಚಿಗೆ ಪಕ್ಷದ ವಿರುದ್ದ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಲೋಡ್ ಶೆಡ್ಡಿಂಗ್ ವಿಚಾರದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಮುಂತಾದವುಗಳು ಆರ್ಎಸ್ಎಸ್ ಈ ನಿರ್ಧಾರ ತಾಳಲು ಪ್ರಮುಖ ಕಾರಣವೆನ್ನಲಾಗಿದೆ.
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಣ ಸಂಬಂಧ ಹಾಳಾಗಲು ಮುಖ್ಯವಾಗಿ ಶೋಭಾ ಕರಂದ್ಲಾಜೆ ಕಾರಣವೆನ್ನಲಾಗಿದೆ. ಶೋಭಾಗೆ ಅನಗತ್ಯವಾಗಿ ಮುಖ್ಯಮಂತ್ರಿಗಳು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎನ್ನುವುದು ಈಶ್ವರಪ್ಪ ಅವರ ದೂರು ಎಂದು ಕೇಶವಕೃಪಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ನಾನು ನನ್ನ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ. ನನಗೂ ಮುಖ್ಯಮಂತ್ರಿಗಳಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಇಂಧನ ಸಚಿವನಾಗಿ ಮುಂದುವರಿಯುವ ಆಶಯ ಹೊಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)