ಹಗರಿಬೊಮ್ಮನಹಳ್ಳಿಯಲ್ಲಿ ಗಾಳಿಯಲ್ಲಿ ಗುಂಡು
ಬಳ್ಳ್ಳಾರಿ, ಮೇ.2: ಹಗರಿಬೊಮ್ಮನಹಳ್ಳಿಯಲ್ಲಿ ಪ್ರೇಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಕಡೆಗೆ ಗುಂಪು ಘರ್ಷಣೆಯಲ್ಲಿ ತೊಡಗಿದ್ದ ಎರಡು ಕೋಮುಗಳನ್ನು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಿ ಲಾಠಿ ಪ್ರಹಾರ ಮಾಡಬೇಕಾಯಿತು. ಅದಕ್ಕೂ ಜಗ್ಗದಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
ಕಲ್ಲು ತೂರಾಟದ ಕಾರಣ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಹತ್ತು ಬೈಕ್ ಗಳು, ಪೊಲೀಸ್ ವಾಹನ ಸೇರಿದಂತೆ ಮೂರು ಕಾರುಗಳು ಜಖಂ ಆಗಿವೆ. ತಹಸೀಲ್ದಾರರ ವಾಹನವೂ ಜಖಂಗೊಂಡಿದೆ. ಯುವತಿಯೊಂದಿಗೆ ಸಂಬಂಧ ಇದೆ ಎಂಬ ಹಿನ್ನೆಲೆಯಲ್ಲಿ ಹುಡುಗಿ ಕಡೆಯ ಸಂಬಂಧಿಕರು ಹುಡುಗನ ಮನೆ ಮುಂದೆ ಜಮಾಯಿಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮಾತಿನ ಚಕಮಕಿ ತಾರಕಕ್ಕೇರಿತೀವ್ರ ಸ್ವರೂಪ ಪಡೆದುಕೊಂಡು ಗುಂಪು ಘರ್ಷಣೆಗೆ ಕಾರಣವಾಯಿತು.
ಎರಡು ವಿಭಿನ್ನ ಕೋಮುಗಳಿಗೆ ಸೇರಿದ ಹುಡುಗ ಮತ್ತು ಹುಡುಗಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು.ಈ ಬಗ್ಗೆ ಇಲ್ಲಸಲ್ಲದ ಅನುಮಾನಗಳು ಎರಡು ಕೋಮುಗಳ ಗುಂಪು ಘರ್ಷಣೆಗೆ ಕಾರಣ ಎನ್ನಲಾಗಿದೆ. ನಂತರ ನಾಪತ್ತೆಯಾದ ಹುಡುಗಿ ಹುಡುಗ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಹುಡುಗಿ ಕಡೆಯವರನ್ನು ಹುಡುಗ ಅವಹೇಳನಕಾರಿಯಾಗಿ ನಿಂದಿಸಿದ್ದೇ ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ರೊಚ್ಚಿಗೆದ್ದ ಗಲಭೆ ಕೋರರು ಒಬ್ಬರ ಮೇಲೊಬ್ಬರು ಕಲ್ಲು ತೂರಾಟದಲ್ಲಿ ತೊಡಗಿದರು. ಇದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡವು.
(ದಟ್ಸ್ ಕನ್ನಡ ವಾರ್ತೆ)