ಮತದಾನಕ್ಕೆ 13 ಪರ್ಯಾಯ ದಾಖಲೆಗಳು ಅವಶ್ಯ
ಶಿವಮೊಗ್ಗ, ಏ. 17 : ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಿ ಮತದಾನ ಮಾಡುವುದನ್ನು ಚುನಾವಣಾ ಆಯೋಗ ಕಡ್ಡಾಯ ಗೊಳಿಸಿತ್ತು. ಆದರೆ ಎಲ್ಲಾ ಮತದಾರರು ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಪಡೆಯಲು ಸಾಧ್ಯವಾಗದಿರುವುದರಿಂದ ಚುನಾವಣಾ ಆಯೋಗವು ಪ್ರತಿಯೊಬ್ಬ ಅರ್ಹ ಮತದಾರರಿಗೆ ಮತದಾನದ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಭಾವಚಿತ್ರವುಳ್ಳ ಗುರುತಿನ ಚೀಟಿ ಹೊಂದಿಲ್ಲದ ಮತದಾರರು ಸಹ ಈ ಕೆಳಕಂಡ 13 ದಾಖಲೆಗಳ ಪೈಕಿ ಯಾವುದಾದರು ಒಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಚುನಾವಣಾ ಆಯೋಗ ಸೂಚಿಸಿರುವ 13 ಪರ್ಯಾಯ ದಾಖಲೆಗಳಲ್ಲಿ ಮತದಾರನ ಭಾವಚಿತ್ರವಿರುವುದನ್ನು ಮಾತ್ರ ಕಡ್ಡಾಯಗೊಳಿಸಿದೆ.
ಚುನಾವನಾ ಆಯೋಗ ನಿಗಧಿ ಪಡಿಸಿರುವ 13 ದಾಖಲೆಗಳ ವಿವರ ಈ ಕೆಳಕಂಡಂತಿದೆ.
ಪಾಸ್ಪೋರ್ಟ್, ಡ್ರೈವಿಂಗ್ ಲೈಸನ್ಸ್, ಪಾನ್ಕಾರ್ಡ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಹಾಗೂ ಸಾರ್ವಜನಿಕ ವಲಯದ ನೌಕರರಿಗೆ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ. ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಅಂಚೆ ಕಛೇರಿಗಳು 2009ನೇ ಫೆಬ್ರವರಿ 28 ರೊಳಗೆ ನೀಡಿರುವ ಭಾವಚಿತ್ರವುಳ್ಳ ಕಿಸಾನ್ ಪಾಸ್ ಪುಸ್ತಕಗಳು.
ಭಾವಚಿತ್ರವುಳ್ಳ ಆಸ್ತಿ ದಾಖಲೆಗಳಾದ ಪಟ್ಟ ಹಾಗೂ ನೋಂದಾಯಿತ ದಾಸ್ತಾವೇಜುಗಳು, ಸಕ್ಷಮ ಪ್ರಾಧಿಕಾರದಿಂದ 2009ನೇ ಫೆಬ್ರವರಿ 28ರೊಳಗೆ ನೀಡಲಾಗಿರುವ ಎಸ್.ಸಿ., ಎಸ್.ಟಿ. ಹಾಗೂ ಓಬಿಸಿ ಪ್ರಮಾಣ ಪತ್ರಗಳು. ಭಾವಚಿತ್ರ ಸಹಿತ 2009 ಫೆಬ್ರವರಿ 28ರೊಳಗೆ ನೀಡಲಾಗಿರುವ ಪಿಂಚಣಿ ದಾಖಲೆ, ಮಾಜಿ ಸೈನಿಕರ ಪಿಂಚಣಿ ಪುಸ್ತಕ, ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ ವಿಧವೆ ಹಾಗೂ ಅವಲಂಭಿತರ ಪ್ರಮಾಣ ಪತ್ರ, ವೃದ್ಧಾಪ್ಯ ವಿರಾಮ ವೇತನ ಆದೇಶ, ಭಾವಚಿತ್ರವಿರುವ ವಿಧವಾ ವೇತನದ ಆದೇಶ, ಭಾವಚಿತ್ರವಿರುವ ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ ಸಲ್ಲಿಸಬಹುದು.
2009ನೇ ಫೆಬ್ರವರಿ 28 ರೊಳಗೆ ನೀಡಲಾಗಿರುವ ಭಾವಚಿತ್ರ ಸಹಿತ ಆಯುಧ ಪರವಾನಗಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ನೀಡಲಾಗಿರುವ ಭಾವಚಿತ್ರವಿರುವ ಅಂಗವಿಕಲರ ಪ್ರಮಾಣ ಪತ್ರ . ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗಿರುವ ಭಾವಚಿತ್ರವಿರುವ ಉದ್ಯೋಗದ ಚೀಟಿ, ಹಾಗೂ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ (ಕಾರ್ಮಿಕ ಮಂತ್ರಾಲಯ ಯೋಜನೆ) ನೀಡಲಾಗಿರುವ ಭಾವಚಿತ್ರವುಳ್ಳ ಸ್ಮಾರ್ಟ್ಕಾರ್ಡ್, ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.
ಇದಲ್ಲದೆ, ಮೇಲ್ಕಂಡ ಯಾವುದಾದರು ದಾಖಲೆಯನ್ನು ಕುಟುಂಬದ ಮುಖ್ಯಸ್ಥನಿಗೆ ನೀಡಲಾಗಿದ್ದರೆ ಅಂತಹ ಕುಟುಂಬದ ಮುಖ್ಯಸ್ಥರೊಂದಿಗೆ ಒಟ್ಟಾಗಿ ಬಂದ ಅವರ ಕುಟುಂಬದ ಇತರೆ ಸದಸ್ಯರು ಸಹ ಇದೇ ಗುರುತಿನ ಚೀಟಿಯನ್ನು ಉಪಯೋಗಿಸಿ ಮತದಾನ ಮಾಡಬಹುದಾಗಿದೆ. ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಹೊಂದಿರದ ಮತದಾರರು ಮೇಲ್ಕಂಡ 13 ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆಯನ್ನು ಹಾಜರುಪಡಿಸಿ ಶಾಂತಿಯುತವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರು ಮನವಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು