4ನೇ ರಂಗ ರಚನೆಗೆ ಪ್ರಣಬ್ ಅಸಮಾಧಾನ
ಗುರುವಾರ ತಾವು ಸ್ಪರ್ಧಿಸಿರುವ ಪಶ್ಚಿಮ ಬಂಗಾಲದ ಜಂಗೀಪುರ್ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 4ನೇ ರಂಗದಿಂದ ಮತಗಳ ವಿಂಗಡಣೆ ಆಗುವ ಸಾಧ್ಯತೆಯೇ ಹೆಚ್ಚು ಎಂದು ಅಭಿಪ್ರಾಯಪಟ್ಟರು. ದೇಶಾದ್ಯಂತ ಕಾಂಗ್ರೆಸ್ ಪಕ್ಷ ಸ್ಪರ್ಧಿಗಿಳಿದಿದ್ದು, ಅತೀ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು. ಅತೀ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಅದರಲ್ಲಿ ಅನುಮಾನವೇ ಬೇಡ. ಕಳೆದ ಐದು ವರ್ಷದಲ್ಲಿ ಮನಮೋಹನ್ ನೇತೃತ್ವದ ಸರ್ಕಾರ ಮಾಡಿರುವ ಅಮೂಲ್ಯ ಸಾಧನೆಯೇ ನಮಗೆ ಶ್ರೀರಕ್ಷೆ ಎಂದು ಮುಖರ್ಜಿ ಹೇಳಿದರು.
ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ ಎಂದು ನಿಖರವಾಗಿ ಹೇಳಲು ಇಚ್ಚಿಸುವುದಿಲ್ಲ. ಅಲ್ಲದೇ ಕಾಂಗ್ರೆಸ್ ಪಕ್ಷ ಡಿಎಂಕೆ, ತೃಣಮೂಲ ಕಾಂಗ್ರೆಸ್, ಎನ್ ಸಿಪಿ, ಜಾರ್ಖಂಡ್ ಮುಕ್ತಿ ಮೋರ್ಚಾ ಸೇರಿದಂತೆ ಅನೇಕ ಪಕ್ಷಗಳೊಂದಿಗೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿದೆ. ಸರ್ಕಾರ ರಚಿಸಲು ಬೇಕಿರುವ ಅಗತ್ಯ ಸಂಖ್ಯಾ ಬಲ ಕಾಂಗ್ರೆಸ್ ಗೆ ದೊರೆಯಲಿದೆ. ಅದರಲ್ಲಿ ಸಂಶಯವೇ ಬೇಡ ಎಂದು ಹೇಳಿದರು. ಸಮಾಜವಾದಿ ಪಕ್ಷ, ಆರ್ ಜೆಡಿ ಮತ್ತು ಎಲ್ ಜೆಪಿ ನಾಲ್ಕನೇ ರಂಗ ರಚಿಸಿಕೊಂಡರೂ ಜಾತ್ಯಾತೀತ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಲಿವೆ ಎಂದು ಮುಖರ್ಜಿ ಹೇಳಿದರು.
(ಏಜೆನ್ಸೀಸ್)