ಸಂಪಂಗಿಗೆ ಸಹಕರಿಸಿದ ಇನ್ಸ್ಪೆಕ್ಟರುಗಳ ಅಮಾನತು
ಬೆಂಗಳೂರು, ಜ. 31 : 5 ಲಕ್ಷ ರು. ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಕೆಜಿಎಫ್ ಶಾಸಕ ವೈ ಸಂಪಂಗಿಗೆ ಭ್ರಷ್ಟಾಚಾರದಲ್ಲಿ ಸಹಕರಿಸಿರುವರೆಂಬ ಆರೋಪದ ಮೇಲೆ ಕೆಜಿಎಫ್ನ ಆಂಡರ್ಸನ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸಬ್ ಇನ್ಸ್ಪೆಕ್ಟರ್ ಪಾಷಾ ಮತ್ತು ಇನ್ಸ್ಪೆಕ್ಟರ್ ಲಕ್ಷ್ಮಯ್ಯ ಅವರು ಫರೂಕ್ ವಿರುದ್ಧದ ಮೂರು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಂಗಿ ಅವರಿಗೆ ಸಹಕರಿಸಿದ್ದರು. ವಿಚಾರಣೆ ನಡೆಸಿದ ನಂತರ ಕೇಂದ್ರ ವಲಯದ ಐಜಿಪಿ ಕಮಲ್ ಪಂಥ್ ಈ ಕ್ರಮ ತೆಗೆದುಕೊಂಡಿದ್ದಾರೆ.
ಆಂಡರ್ಸನ್ ಠಾಣೆಯಲ್ಲಿ ಬಿ ರಿಪೋರ್ಟ್ ಹಾಕಿಸುವುದಾಗಿ ಹೇಳಿ 5 ಲಕ್ಷ ರು. ಲಂಚ ಇಸಿದುಕೊಳ್ಳುವಾಗ ಸಂಪಂಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಸಂಪಂಗಿಯವರು 50 ಸಾವಿರ ರು. ನಗದು ಮತ್ತು 45 ಸಾವಿರ ರು. ಚೆಕ್ ಲಂಚರೂಪದಲ್ಲಿ ಸ್ವೀಕರಿಸಿದ್ದನ್ನು ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿರುವುದಾಗಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪ್ ಕುಮಾರ್ ದತ್ತ ಹೇಳಿದ್ದಾರೆ.
ಎದೆನೋವಿಲ್ಲ : ಬಂಧನದ ನಂತರ ಎದೆನೋವಿನ ಕಾರಣವೊಡ್ಡಿ ಜಯದೇವ ಆಸ್ಪತ್ರೆ ಸೇರಿದ್ದ ಸಂಪಂಗಿ ಅವರಿಗೆ ಯಾವುದೇ ರೀತಿಯ ಹೃದಯಬೇನೆ ಇಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. ಇಂದು ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಹೊತ್ತಿನಲ್ಲೇ ಸಂಪಂಗಿ ಹೊಸರಾಗ ಎಳೆದಿದ್ದಾರೆ. ತಲೆನೋವು, ಮೈಕೈನೋವು ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ತಪಾಸಣೆಗಾಗಿ ಅವರನ್ನು ನಿಮ್ಹಾನ್ಸ್ ಗೆ ಕರೆದೊಯ್ಯುವ ಸಾಧ್ಯತೆಯಿದೆ.
ಸಿಟಿ ಸಿವಿಲ್ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಸಂಪಂಗಿ ಅವರಿ ಹೆಚ್ಚುವರಿ ನ್ಯಾಯಾಧೀಶ ಆರ್ಎಂ ಶೆಟ್ಟರ್ ಅವರು ಜಾಮೀನು ನಿರಾಕರಿಸಿ ಫೆಬ್ರವರಿ 3ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಸಂಪಂಗಿ ಜಯದೇವ ಆಸ್ಪತ್ರೆಗೆ ದಾಖಲು
ಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ











Click it and Unblock the Notifications