ನಗರದಲ್ಲಿ ಸೈನಿಕರ ಗುಂಡಿಗೆ ವಿದ್ಯಾರ್ಥಿ ಬಲಿ
ಬೆಂಗಳೂರು, ಡಿ.28: ನಗರದ ಆರ್ಮಿ ಕ್ಯಾಂಪ್ ಬಳಿ ಇರುವ ಪ್ರಾದೇಶಿಕ ಕಮಾಂಡರ್ ಛೀಫ್ ಪಿ.ಎಸ್. ರವೀಂದ್ರನಾಥ್ ಮನೆಗೆ ನುಗ್ಗುತ್ತಿದ್ದ ಎನ್ನಲಾದ ಮಹಮ್ಮ್ಮದ್ ಮುಖ್ ರಾಮ್ ಪಾಷ(20)ಎಂಬಾತನನ್ನು ಕಾವಲಿನ ಸೈನಿಕರು ಭಾನುವಾರ ಮುಂಜಾನೆ 1 ಗಂಟೆಗೆ ಸುಮಾರಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.ಈ ಶೂಟೌಟ್ ಪ್ರಕರಣ ನಿಗೂಢವಾಗಿದ್ದು, ಪೊಲೀಸರವಿಶೇಷ ತಂಡ ತನಿಖೆ ನಡೆಸುತ್ತಿದೆ.
ಬಿಟಿಎಂ ಲೇಔಟಿನ ನಿವಾಸಿ, ಬಾಲ್ಡ್ ವೀನ್ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದಲ್ಲಿ ಓದುತ್ತಿರುವ ಮುಖ್ ರಾಮ್, ರಾತ್ರಿ ಸುಮಾರು 12 ಗಂಟೆ ವೇಳೆಗೆ ಎಂಜಿ ರಸ್ತೆ ಸುತ್ತ ಮುತ್ತ ಬೈಕ್ ನಲ್ಲಿ ಸುತ್ತಾಡುತ್ತಿದ್ದ. ಅವನ ಚರ್ಯೆಗಳು ಅನುಮಾನಾಸ್ಪದವಾಗಿದ್ದು, ಶಂಕಿತ ಉಗ್ರನಿರಬಹುದೆಂದು ಪೊಲೀಸರು ನಿರ್ಧರಿಸಿ ಆತನನ್ನು ಹಿಂಬಾಲಿಸಿದರು.
ಪೊಲೀಸರು ತನ್ನ ಬೆನ್ನತ್ತಿರುವುದನ್ನು ಕಂಡು ಎಂಜಿ ರಸ್ತೆಯಿಂದ ಆರ್ಮಿ ಹೌಸ್(Flag Staff House) ಕಡೆಗೆ ಹೋಗಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಅಲ್ಲಿನ ಆರ್ಮಿ ಗಾರ್ಡ್ ಗಳು ಮುಖ್ರಾಮ್ ನನ್ನು ಎಚ್ಚರಿಸಿದ್ದಾರೆ ಆದರೆ ಅದಕ್ಕೆ ಕಿವಿಗೊಡದೆ ಮುಂದುವರೆದ್ದರಿಂದ ಆರು ಸುತ್ತು ಗುಂಡು ಹಾರಿಸಲಾಗಿದೆ. ಗಾಯಗೊಂಡ ಮುಖ್ ರಾಮ್ ಸ್ನೇಹಿತರ ಸಹಾಯದಿಂದ ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿದರೂ, ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬ್ರಿಗೇಡಿಯರ್ ಮನೆ ಬಳಿ ಕೂತಿದ್ದಾಗ, ಮನೆಯವರಿಗೆ ಪೊಲೀಸರು ಬೆನ್ನತ್ತಿರುವ ವಿಷಯ ತಿಳಿಸಿದ್ದರಿಂದ ತಕ್ಷಣ ಆತನ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ನಂತರ ಶವವನ್ನು ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೂರ್ವ ವಲಯದ ಡಿಸಿಪಿ ಬಿಕೆ ಸಿಂಗ್ ತಿಳಿಸಿದ್ದಾರೆ. ಬೌರಿಂಗ್ ಆಸ್ಪತ್ರೆಗೆ ಆಯುಕ್ತ ಬಿದಿರಿ ಭೇಟಿ ನೀಡಿ, ತನಿಖೆಗೆ ಆದೇಶಿಸಿದ್ದಾರೆ. ಸೇನಾ ಕಾವಲು ಪಡೆ ಅವರ ದುಡುಕಿನಿಂದ ಪ್ರಾಣಹಾನಿಯಾಗಿದೆ. ಇಲ್ಲವಾಗಿದ್ದಲ್ಲಿ ಸೆರೆ ಹಿಡಿದು ನಿಜಾಂಶ ತಿಳಿಯಬಹುದಾಗಿತ್ತು. ಎಂಜಿ ರಸ್ತೆ ಮುಂತಾದೆಡೆ ವೀಕೆಂಡ್ ಡ್ರೈವಿಂಗ್, ಜಾಲಿ ರೈಡ್ ಗಳು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ಬಿದಿರಿ ಹೇಳಿದರು.
(ಏಜೆನ್ಸೀಸ್)