ಮತಾಂತರ : ಮಂಗಳೂರು ಉದ್ವಿಗ್ನ, ನಿಷೇಧಾಜ್ಞೆ ಜಾರಿ
ಮಂಗಳೂರು, ಸೆ. 14 : ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಭಜರಂಗದಳ ಕಾರ್ಯಕರ್ತರು ಏಕಕಾಲದಲ್ಲಿ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿರುವ ಆರು ಚರ್ಚ್ ಗಳ ದಾಳಿ ನಡೆಸಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಭಾನುವಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪರಿಸ್ಥಿತಿ ಉದ್ನಿಗ್ನಗೊಂಡಿದ್ದು, ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕ್ರೈಸ್ತರ ಪ್ರತಿಭಟನೆ
ಭಜರಂಗದಳ ಕಾರ್ಯಕರ್ತರು ನೆಡೆಸಿದ ದಾಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕ್ರಿಶ್ಚಿಯನ್ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಏಕಾಏಕಿ ಚರ್ಚ್ ಗೆ ನುಗ್ಗಿ ದಾಂಧಲೆ ನಡೆಸಿ ಅಲ್ಲಿ ಪ್ರಾರ್ಥನೆಯಲ್ಲಿ ನಿರತವಾಗಿರುವ ಜನರ ಮೇಲೆ ಹಲ್ಲೆ ನಡೆಸಿರುವುದು ಉಗ್ರವಾಗಿ ಖಂಡಿಸಿದ್ದಾರೆ. ಚರ್ಚ್ ಗಳಲ್ಲಿ ಮತಾಂತರದಂತಹ ಕೆಲಸಗಳು ಮಾಡುತ್ತಿಲ್ಲ. ಇಂದು ಭಾನುವಾರವಾಗಿದ್ದರಿಂದ ಚರ್ಚ್ ನಲ್ಲಿ ಪ್ರಾರ್ಥನೆಯನ್ನು ಮಾಡಲಾಗುತ್ತಿತ್ತು. ಅದನ್ನು ತಪ್ಪಾಗಿ ಅರ್ಥೈಸಿ ಮತಾಂತರ ಮಾಡುತ್ತಾರೆ ಎಂದು ದಾಳಿ ನಡೆಸುವುದು ಸರಿಯೆ ಎನ್ನುವುದು ಪ್ರತಿಭಟನಾಕಾರ ಪ್ರಶ್ನೆಯಾಗಿದೆ.
ನ್ಯೂಲೈಫ್ ಎಂಬ ಚರ್ಚ್ ಮತಾಂತರ ಮಾಡುತ್ತಿದೆ ಎನ್ನಲಾಗಿದೆ, ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯಕ್ಕೆ ಶಿಕ್ಷೆ ನೀಡುವುದು ಎಲ್ಲಿಯ ನ್ಯಾಯ ಎಂದು ಕಿಡಿಕಾರಿದ್ದಾರೆ. ಭಜರಂಗದ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಚರ್ಚ್ ಗಳ ಮುಖ್ಯಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಇರುವ ಚರ್ಚ್ ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮತಾಂತರ ಮಾಡುತ್ತಿದ್ದ ಐವರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಉಡುಪಿ- ಮಂಗಳೂರಿನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ.
ಖರ್ಗೆ ಖಂಡನೆ
ಚರ್ಚೆಗಳ ಮೇಲೆ ಸರಣಿ ದಾಳಿ ನಡೆಯುತ್ತಿರುವುದನ್ನು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಗೃಹ ಸಚಿವರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕೆಲಸ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವ ಹಿನ್ನೆಲೆಯಲ್ಲಿ ಸಂಘ ಪರಿವಾರ ಜನರು ಜನವಿರೋಧಿ ಕೆಲಸಕ್ಕೆ ಕೈಹಾಕಿದ್ದಾರೆ. ಘಟನೆಯನ್ನು ನ್ಯಾಯಮೂರ್ತಿಯೊಬ್ಬರ ನೇತ್ರತ್ವದಲ್ಲಿ ತನಿಖೆಗೆ ಆಗ್ರಹಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸಿ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್, ಘಟನೆಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)
ಮಂಗಳೂರು: ಭಜರಂಗದಳದಿಂದ ಚರ್ಚ್ ಮೇಲೆ ದಾಳಿ