ಆ. 25 ರಂದು ವಿಶ್ವಾಸಮತ ಯಾಚನೆ : ಮಧು ಕೊಡಾ
ರಾಂಚಿ/ ನವದೆಹಲಿ, ಆ. 19 : ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಬೆಂಬಲ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಆ. 25ಕ್ಕೆ ಸದನದಲ್ಲಿ ಬಹುಮತ ಸಾಬೀತುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಮಧು ಕೊಡಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾಜ್ಯಪಾಲ ಸಯ್ಯದ್ ಶಿಬ್ತೆ ರಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ಜೆಎಂಎಂ ಮುಖಂಡ ಶಿಬುಸೋರೆನ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿರುವುದರಿಂದ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ. ಸರ್ಕಾರಕ್ಕೆ ಬೇಕಿರುವ ಅಗತ್ಯ ಮತಗಳು ನಮ್ಮ ಬಳಿ ಇವೆ ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ.
ಇದರ ಬೆನ್ನೆಲ್ಲೇ ಜೆಎಂಎಂ ಮುಖಂಡ ಸುಧೀರ್ ಮೆಹ್ತೊ ಮಾತನಾಡಿ, ಕಾಂಗ್ರೆಸ್ ವರಿಷ್ಠರು ಮಾತಿಗೆ ತಪ್ಪಿದ್ದಾರೆ. ಅತ್ಯಂತ ಸಂಕಷ್ಟದ ಸಮಯದಲ್ಲಿ ಯುಪಿಎ ಸರ್ಕಾರವನ್ನು ಕಾಪಾಡಿರುವ ನಮಗೆ ಕಾಂಗ್ರೆಸ್ ನಾಯಕರು ಉತ್ತಮ ಬಹುಮಾನವನ್ನೇ ನೀಡಿದ್ದಾರೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಮಧು ಕೊಡಾ ರಾಜೀನಾಮೆ ನೀಡದಿರುವ ಹಿನ್ನೆಲೆಯಲ್ಲಿ ಜೆಎಂಎಂನ 17 ಶಾಸಕರು ಮತ್ತು 5 ಮಂದಿ ಸಂಸದರು ಮತ್ತೊಂದು ಸುತ್ತು ಸಭೆ ನಡೆಸಿ ಮಾತುಕತೆ ನಡೆಸಿದ್ದು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸುಧೀರ್ ಮೆಹ್ತೊ ಅವರು ಮಧು ಕೊಡಾ ಸರ್ಕಾರದಲ್ಲಿ ಉಪಮಖ್ಯಮಂತ್ರಿಯಾಗಿದ್ದರು. ಜೆಎಂಎಂ ಪಕ್ಷ ಬೆಂಬಲ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಎಂಎಂ ಮುಖಂಡರು ಬೆಂಬಲ ಹಿಂದಕ್ಕೆ ಪಡೆದು ರಾಷ್ಟ್ರಪತಿ ಆಳ್ವಿಕೆ ಹೇರಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ. ಆ. 25ರಂದು ಸರ್ಕಾರ ಬಹುಮತ ಸಾಬೀತುಪಡಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಜಾರ್ಖಂಡ್: ಅತಂತ್ರವಾದ ಮಧು ಕೊಡಾ ಸರ್ಕಾರ