ಎನ್ಎಸ್ ಜಿ ಸಭೆಗೆ ತೆರಳಿದ ಭಾರತದ ನಿಯೋಗ
ನವದೆಹಲಿ, ಆ. 19 : ಪರಮಾಣು ಸರಬರಾಜು ರಾಷ್ಟ್ರಗಳ(ಎನ್ಎಸ್ ಜಿ) ಸಭೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶಂಕರ ಮೆನನ್ ಅವರೊಂದಿಗೆ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ಮಂಗಳವಾರ ವಿಯನ್ನಾಗೆ ತೆರಳಿತು.
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಆ. 21ರಂದು 45 ಸದಸ್ಯರನ್ನು ಹೊಂದಿರುವ ಪರಮಾಣು ಸರಬರಾಜು ರಾಷ್ಟ್ರಗಳ ಸಭೆ ನಡೆಯಲಿದೆ. ಎನ್ಎಸ್ ಜಿ ರಾಷ್ಟ್ರಗಳಲ್ಲಿ ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಹಂಗೇರಿ ದೇಶಗಳ ಮುಖಂಡರೊಂದಿಗೆ ಆ. 21ರ ಸಭೆಗೂ ಮುನ್ನ ಭಾರತದ ನಿಯೋಗ ಮಾತುಕತೆ ನಡೆಸಲಿದೆ.
ಭಾರತೀಯ ನಿಯೋಗ ವಿಯನ್ನಾಗೆ ತೆರಳುವುದಕ್ಕಿಂತ ಮುಂಚೆ ಸೋಮವಾರ ನವದೆಹಲಿಯಲ್ಲಿ ಪರಮಾಣು ಒಪ್ಪಂದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ರಾಷ್ಟ್ರೀಯ ಸಲಹೆಗಾರ ಎಂ.ಕೆ.ನಾರಾಯಣನ್ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು. ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಿವಶಂಕರ ಮೆನನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅತ್ತ ಜಾರ್ಜ್ ಬುಷ್ ಆಡಳಿತ ಆ. 21 ರಂದು ನಡೆಸಲಿರುವ ಎನ್ಎಸ್ ಜಿ ಸಭೆ ಸೇರಿದಂತೆ ಒಪ್ಪಂದಕ್ಕೆ ಅಂತಿಮ ಸ್ಪರ್ಶ ಕೊಡಲು ಭಾರಿ ಲಾಬಿ ನಡೆಸಿದೆ.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ನೇತೃತ್ವದಲ್ಲಿ ಪ್ರಧಾನಮಂತ್ರಿ ರಾಜಕೀಯ ಸಲಹೆಗಾರ ಶ್ಯಾಮ್ ಶರಣ್, ಪರಮಾಣು ಇಲಾಖೆಯ ಆರ್. ಬಿ. ಗ್ರೋವರ್ ಹಾಗೂ ಡಿ.ಬಿ.ವೆಂಕಟೇಶ್ ವರ್ಮಾ ಅವರು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್