ಗ್ರೇಟರ್ ನೋಯಿಡಾ ಅವ್ಯವಹಾರ ನಮ್ಮದಲ್ಲ: ಮಾಯಾ
ಲಕ್ನೋ, ಆ. 19 : ಮುಲಾಯಂ ಸಿಂಗ್ ಯಾದವ್ ಸರ್ಕಾರ ಅಡಳಿತದಲ್ಲಿದ್ದಾಗ ಗ್ರೇಟರ್ ನೋಯಿಡಾ ಯೋಜನೆಯ ಕುರಿತ ಭೂಖರೀದಿ ಹಾಗೂ ರೈತರಿಗೆ ಪರಿಹಾರ ನೀಡುವ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಕ್ಟೋಬರ್ 2006ಕ್ಕಿಂತ ಪೂರ್ವದಲ್ಲಿ ಯೋಜನೆಯ ಭೂಖರೀದಿಯ ವ್ಯವಹಾರ ನಡೆದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಯ ಕುರಿತ ಯಾವ ಭೂಖರೀದಿಯ ಪ್ರಕ್ರಿಯೆಯೂ ನಡೆದಿಲ್ಲ ಎಂದರು. 2005-06ನೇ ಸಾಲಿನಲ್ಲಿ ಗ್ರೇಟರ್ ನೋಯಿಡಾ ಯೋಜನೆಗೆ ಸಂಬಂಧಿಸಿದಂತೆ ಗಾಡಿಬಚ್ಚೆಡಾ ಪಟ್ಟಣ ಸೇರಿದಂತೆ ಒಟ್ಟು ಒಂಬತ್ತು ಹಳ್ಳಿಗಳು ಈ ಯೋಜನೆಯ ಕಾರ್ಯವ್ಯಾಪ್ತಿಗೆ ಬರಲಿವೆ ಎಂದು ನೀಲ ನಕ್ಷೆಯನ್ನು ತಯಾರಿಸಲಾಗಿದೆ. ಇಲ್ಲಿರುವ ಭೂಖರೀದಿ ಮತ್ತು ರೈತರಿಗೆ ಪರಿಹಾರಧನವನ್ನು ಅಂದಿನ ಸರ್ಕಾರವೇ ನಿರ್ಧರಿಸಿದೆ. ಅದರ ಆಧಾರದ ಮೇಲೆ ಗ್ರೇಟರ್ ನೋಯಿಡಾ ಅಥಾರಿಟಿಯಿಂದ ಎಲ್ಲ ರೈತರಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ. ಆದರೆ 2006ರಲ್ಲಿ ಇದ್ದ ಬೆಲೆ ಇಂದಿನ ಬೆಲೆಗೆ ಅಜಗಜಾಂತರ ವ್ಯತ್ಯಾಸವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಮಾಯಾವತಿ ವಿವರಿಸಿದರು.
ಅನಗತ್ಯವಾಗಿ ಸಮಾಜವಾದಿ ಪಕ್ಷದ ಮುಖಂಡರು ಯೋಜನೆ ಕುರಿತು ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ತಮ್ಮ ಸರ್ಕಾರದಿಂದಲೇ ಯೋಜನೆಗೆ ಅಂಕಿತ ಬೀಳುವ ಮೂಲಕ ಕಾಮಗಾರಿ ಆರಂಭವಾಗಿದೆ ಎನ್ನುವ ಸತ್ಯವನ್ನು ಆ ಪಕ್ಷದ ಮುಖಂಡರು ಅರಿಯಬೇಕು ಎಂದು ಹೇಳಿದರು. ಗ್ರೇಟರ್ ನೋಯಿಡಾ ಸಮಸ್ಯೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡರು ರೈತರೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ರೈತರು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿ ಅನೇಕ ಸಮಸ್ಯೆಗಳನ್ನು ಉಂಟುಮಾಡಿದೆ.
(ದಟ್ಸ್ ಕನ್ನಡ ವಾರ್ತೆ)