ಬಿಐಎಎಲ್ ಮಾಹಿತಿ ಹಕ್ಕು ಕಾಯ್ದೆಗೆ ಬರಲಿದೆ : ಆಯೋಗ
ಬೆಂಗಳೂರು, ಆ. 19 : ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಸರ್ಕಾರಿ ಯೋಜನೆಗಳು ರಾಜ್ಯ ಮಾಹಿತಿ ಹಕ್ಕು ಆಯೋಗದ ವ್ಯಾಪ್ತಿಯಡಿಯಲ್ಲಿ ಬರಲಿದೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ರಾಜ್ಯ ಮಾಹಿತಿ ಹಕ್ಕು ಆಯೋಗದ ಮಿತಿಗೆ ಒಳಪಟ್ಟಿದೆ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಕೆ.ಕೆ. ಮಿಶ್ರಾ ಹೇಳಿದ್ದಾರೆ.
ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಕೆ.ಕೆ.ಮಿಶ್ರಾ ಹಾಗೂ ಮಾಹಿತಿ ಹಕ್ಕು ಆಯುಕ್ತರಾದ ಕೃಷ್ಣ ಮತ್ತು ಎ.ತಿಪ್ಪೇಸ್ವಾಮಿ ಅವರನ್ನು ಒಳಗೊಂಡ ರಾಜ್ಯ ಮಾಹಿತಿ ಆಯೋಗದ ಪೂರ್ಣ ಪ್ರಮಾಣದ ನ್ಯಾಯಾಪೀಠವು, ಬಿಐಎಎಲ್ ಸಾರ್ವಜನಿಕ ಸಂಸ್ಥೆಯಾಗಿದೆ. ಇದರ ಎಲ್ಲ ಅಗುಹೋಗುಗಳನ್ನು ತಿಳಿದುಕೊಳ್ಳಲು ಜನಸಾಮಾನ್ಯರ ಹಕ್ಕುದಾರರಾಗಿತ್ತಾರೆ ಅಭಿಪ್ರಾಯಪಟ್ಟಿದೆ.
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಖಾಸಗಿ ಸಹಭಾಗಿತ್ವ ಹೊಂದಿದ್ದರೂ ಅದರ ನಿರ್ಮಾಣಕ್ಕೆ ಸರ್ಕಾರಿ ಹಣವನ್ನು ವಿನಿಯೋಗಿಸಲಾಗಿದೆ. ಅದ್ದರಿಂದ ವಿಮಾನ ನಿಲ್ದಾಣ ಕೂಡಾ ರಾಜ್ಯ ಮಾಹಿತಿ ಹಕ್ಕು ಆಯೋಗದ ವಾಪ್ತಿಗೆ ಒಳಪಟ್ಟಿದ್ದು, ಸಾರ್ವಜನಿಕರಿಗೆ ಇಚ್ಛೆಪಟ್ಟಲ್ಲಿ ಇದರ ಎಲ್ಲ ವಿವರವನ್ನು ಕಾನೂನಿನಡಿಯಲ್ಲಿ ನೀಡಬೇಕು ಎಂದು ನ್ಯಾಯಾಪೀಠ ಬಿಐಎಎಲ್ ಗೆ ಆದೇಶ ನೀಡಿದೆ. ಅಲ್ಲದೇ ವಿಮಾನ ನಿಲ್ದಾಣದ ಕುರಿತಾಗಿ ಮಾಹಿತಿ ನೀಡಲು ವಿಶೇಷ ಸಂಪರ್ಕಾಧಿಕಾರಿಯೊಬ್ಬರನ್ನು ನೇಮಿಸುವಂತೆ ಸಂಸ್ಥೆಗೆ ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಬಿಐಎಎಲ್ ಸಂಸ್ಥೆ ವಿವರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಗರದ ಬೆನ್ಸನ್ ಐಸಾಕ್ ಎಂಬುವವರು ರಾಜ್ಯ ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡು ಎರಡೇ ವಾರದಲ್ಲಿ ಆಯೋಗ ವಿಚಾರಣೆ ನಡೆಸಿ ತೀರ್ಪು ನೀಡಿದೆ.
(ದಟ್ಸ್ ಕನ್ನಡ ವಾರ್ತೆ)