ವೆಂಕಯ್ಯ ನಾಯ್ಡು ಇದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ
ವಿಜಯವಾಡ, ಆ. 8 : ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಸೇರಿ ಹಲವು ರಾಜಕೀಯ ನಾಯಕರು ಪ್ರಯಾಣಿಸುತ್ತಿದ್ದ ಕಿಂಗ್ ಫಿಷರ್ ವಿಮಾನ ಹಕ್ಕಿಯೊಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ವೆಂಕಯ್ಯ ನಾಯ್ಡು ಸೇರಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯ ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಕಿಂಗ್ ಫಿಷರ್ ವಿಮಾನವು ವಿಜಯವಾಡದಿಂದ ಹೈದರಾಬಾದ್ ಗೆ ತೆರಳಬೇಕಿತ್ತು. ಟೇಕಾಫ್ ಆಗಿ ಕೆಲ ನಿಮಿಷಗಳಲ್ಲಿ ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಜರುಗಿದೆ. ಪರಿಸ್ಥಿತಿ ಅರಿತ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು.
ನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ವೆಂಕಯ್ಯ ನಾಯ್ಡು ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಸೇರಿ 65 ಮಂದಿ ಪ್ರಯಾಣಿಕರು ಸುರಕ್ಷಿತರಾಗಿ ಇದ್ದಾರೆ ಕಾಂಗ್ರೆಸ್ ನ ಶ್ರೀನಿವಾಸರಾವ್, ದುಗ್ಗುಪತಿ ವೆಂಕಟೇಶ್ವರರಾವ್ ಕೂಡ ವಿಮಾನದಲ್ಲಿ ಪ್ರಯಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)