ಕಡೆಗೂ ಡಾ.ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ
ತಿರುಚಿರಾಪಳ್ಳಿ, ಆ.5: ಕನ್ನಡಿಗರ ಕಣ್ಮಣಿ ಡಾ.ರಾಜ್ಕುಮಾರ್ ಸೇರಿದಂತೆ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯ ಅಂಚೆ ಚೀಟಿಗಳನ್ನು ಈ ವರ್ಷ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹಾಗೆಯೇ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಭಕ್ತವತ್ಸಲಂ, 'ದಿನಮಲರ್' ತಮಿಳು ದಿನಪತ್ರಿಕೆ ಸಂಸ್ಥಾಪಕ ಟಿ.ವಿ.ರಾಮಸುಬ್ಬಯ್ಯರ್, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್, ಗಾಂಧಿವಾದಿ ತಿಲ್ಲಾಯಾಡಿ ವಲ್ಲಿಯಮ್ಮೈ, ಇತಿಹಾಸಕಾರರಾದ ರಾಣಿ ವೇಲು ನಾಚಿಯರ್, ಗೀತ ರಚನೆಕಾರ ಉದುಮಲೈ ನಾರಾಯಣ ಕವಿ, ಸಾಮಾಜಿಕ ಕಾರ್ಯಕರ್ತ ಪಿ.ಟಿ.ತೇಯಗರಾಯ, ಬಂಗಾಳಿ ನಟ ಉತ್ತಮ್ ಕುಮಾರ್ ಹಾಗೂ ಕೇಂದ್ರ ಮಾಜಿ ಸಚಿವ ವೈ.ಬಿ.ಚವಾಣ್ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ಅಂಚೆ ಚೀಟಿ ಸಲಹಾ ಸಮಿತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಗಣ್ಯರ ಅಂಚೆ ಚೀಟಿ ಪಟ್ಟಿಯಲ್ಲಿ ತಮಿಳುನಾಡು ಸಿಂಹಪಾಲು ಪಡೆದಿದೆ.
ಡಾ.ರಾಜ್ ಸೇರಿದಂತೆ ಕರ್ನಾಟಕದ ಐದು ಅಂಚೆ ಚೀಟಿಗಳನ್ನು ಬಿಡುಗಡೆಗೆ ಮಾಡುವುದಾಗಿ ಈ ಹಿಂದೆ ಪ್ರಧಾನಿ ಮನಮೋಹನ್ಸಿಂಗ್ ಕೊಟ್ಟ .ಭರವಸೆ ಹುಸಿಯಾಗಿದೆ. ರಾಜ್ಕುಮಾರ್ ಅವರ ಅಂಚೆ ಚೀಟಿ ಪ್ರಕಟಿಸುವ ಪ್ರಸ್ತಾವನೆಯನ್ನು ರಾಜ್ಯ ಅಂಚೆ ಇಲಾಖೆ ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಹಾಗೆಯೇ ಕರ್ನಾಟಕ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಅಂಚೆ ಚೀಟಿ ಮುದ್ರಿಸುವ ಪ್ರಸ್ತಾವನೆಯನ್ನು ಕಳುಹಿಸಿತ್ತು.
ಪ್ರಮುಖ ಸಭೆ-ಸಮಾರಂಭಗಳ ಪಟ್ಟಿಯಲ್ಲಿ ಬೀಜಿಂಗ್ ಒಲಂಪಿಕ್ಸ್, ಅಕ್ಟೋಬರ್ 2008ರಲ್ಲಿ ಪುಣೆಯಲ್ಲಿ ಪ್ರಾರಂಭವಾಗಲಿರುವ ಮೂರನೆ ಕಾಮನ್ವೆಲ್ತ್ ಯುವ ಕ್ರೀಡೆಗಳು, ಮಕ್ಕಳ ದಿನಾಚರಣೆ ಹಾಗೂ ಪದಾತಿ ಪಡೆಯ ವರ್ಷಾಚರಣೆ ಈ ವರ್ಷ ಬಿಡುಗಡೆಯಾಗುವ ಅಂಚೆ ಚೀಟಿಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ.
ದೇಶದ ಪ್ರಸಿದ್ಧ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ, ಭಾರತ ಅನಿಲ ಪ್ರಾಧಿಕಾರ, ರಾಮ್ಪುರ್ ರಾಝಾ ಗ್ರಂಥಾಲಯ, ಕೋಸ್ಟ್ ಗಾರ್ಡ್, ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹಾಗೂ ನಾಲ್ಕು ವಲಯಗಳ ರೈಲ್ವೆ ನಿಲ್ದಾಣಗಳು ಸೇರಿವೆ. ಈ ಎಲ್ಲಾ ಅಂಚೆಚೀಟಿಗಳ ವಿನ್ಯಾಸ ಹಾಗೂ ಬಿಡುಗಡೆ ದಿನಾಂಕವನ್ನು ಅಂಚೆ ಇಲಾಖೆಯ ಪ್ರಧಾನನಿರ್ದೇಶಕರು ಬಿಡುಗಡೆ ಮಾಡಲಿದ್ದಾರೆ.
(ಏಜೆನ್ಸೀಸ್)












Click it and Unblock the Notifications