ವಿದ್ಯುತ್ ಕಡಿತಕ್ಕೆ ಜೊತೆಯಾದ ಡೀಸೆಲ್ ಕ್ಷಾಮ
ಬೆಂಗಳೂರು, ಜು.25: ಒಂದೆಡೆ ವಿದ್ಯುತ್ ಅಭಾವ ಮತ್ತೊಂದೆ ಡೀಸೆಲ್ ಕೊರತೆಯಿಂದ ಬೆಂಗಳೂರಿನ ಜನತೆ ರೋಸಿ ಹೋಗಿದ್ದಾರೆ. ಬಂಕ್ಗಳ ಬಳಿ ಡೀಸೆಲ್ಗಾಗಿ ಸಾಲುಗಟ್ಟಿ ನಿಂತ ವಾಹನಗಳು ಹಾಗೂ ಬಳಕೆದಾರರನ್ನು ನೋಡಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ.
ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಕಾಪಾಡಲು ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಿ 'ಪವರ್ ಕಟ್'ಗೆ ಚಾಲನೆ ನೀಡಲಾಯಿತು. ವಿದ್ಯುತ್ ಇಲ್ಲದ ಕಾರಣ ಡೀಸೆಲ್ನ ಬೇಡಿಕೆ ಅಧಿಕವಾಗಿ ಡೀಸೆಲ್ ಜನರೇಟರ್ಗಳು ಯದ್ವಾತದ್ವಾ ಡೀಸೆಲನ್ನು ಕುಡಿಯುತ್ತಿವೆ. ಈ ಹಿಂದಿನ ಎಲ್ಲ ದಾಖಲೆಗಳನ್ನ್ನು ಮೀರಿಸಿ ಡೀಸೆಲ್ ಬಳಕೆ ಬೆಂಗಳೂರಿನಲ್ಲಿ 2,900 ಕಿ.ಲೋ ಲೀಟರ್ಗಳನ್ನು ಬುಧವಾರ ಮುಟ್ಟಿದೆ. ವಿದ್ಯುತ್ ಕಡಿತದ ಕಾರಣ ಬೃಹತ್ ಮಾರಾಟ ಮಳಿಗೆಗಳು, ವಾಣಿಜ್ಯ ಸಂಕೀರ್ಣಗಳು, ಕೈಗಾರಿಕೆಗಳು, ಅಂಗಡಿಗಳು ಪಕ್ಕಕ್ಕಿಟ್ಟಿದ್ದ ಡೀಸೆಲ್ ಜನರೇಟರ್ಗಳ ಧೂಳು ಕೊಡವಿ ಚಾಲೂ ಮಾಡಿದವು. ನಗರದಲ್ಲಿ ಡೀಸೆಲ್ ಅಭಾವ ತಲೆದೋರಲು ಇದೇ ಪ್ರಮುಖ ಕಾರಣ. ಕಳೆದ ವರ್ಷ ಇದೇ ಸಮಯಕ್ಕೆ ಡೀಸೆಲ್ ಬಳಕೆ ಬೆಂಗಳೂರಿನಲ್ಲಿ ಶೇ.60ರಷ್ಟು ಕಡಿಮೆ ಇತ್ತು.
ಜೂನ್ ತಿಂಗಳಲ್ಲಿ ಶೇ. 11ರಷ್ಟು ಹೆಚ್ಚಾದ ಡೀಸೆಲ್ ಬೇಡಿಕೆ ಜುಲೈ ತಿಂಗಳ ಮಧ್ಯಭಾಗಕ್ಕೆ ಶೇ.25 ರಿಂದ 30 ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಪ್ರಧಾನ ವ್ಯವಸ್ಥಾಪಕ ಬಿ.ಅಶೋಕ್. ಡೀಸೆಲ್ ಸಿಗುತ್ತದೋ ಇಲ್ಲವೋ ಎಂದು ಕಳೆದ ಎರಡು ದಿನಗಳಿಂದ ಆತಂಕಕ್ಕೆ ಒಳಗಾಗಿರುವ ಬೆಂಗಳೂರಿನ ಗ್ರಾಹಕರು ತಮ್ಮ ಅಗತ್ಯಕ್ಕೂ ಹೆಚ್ಚಾಗಿ ಡೀಸೆಲ್ ಸಂಗ್ರಹಿಸುತ್ತಿರುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಗ್ರಾಹಕರಲ್ಲಿ ಯಾವುದೇ ಆತಂಕ ಬೇಡ ಎಂದು ಅವರು ಉತ್ತರಿಸಿದರು.
ಟಾಟಾ ಹಾಗೂ ಜಿಂದಾಲ್ ಸಂಸ್ಥೆಗಳಿಂದ ರಾಜ್ಯ ಸರ್ಕಾರ 50 ಮೆಗಾ ವ್ಯಾಟ್ ವಿದ್ಯುತ್ತನ್ನು ಹಾಗೂ ಉಳಿದ ರಾಜ್ಯಗಳಿಂದ 500 ಮೆಗಾವ್ಯಾಟ್ ವಿದ್ಯುತ್ತನ್ನು ಪಡೆಯುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವ್ವರಪ್ಪ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ದಿನಕ್ಕೆ ಸರಾಸರಿ 5ಗಂಟೆಗಳ ಕಾಲ ವಿದ್ಯುತ್ತನ್ನು ಕಡಿತ ಮಾಡಲಾಗುತ್ತ್ತಿದೆ. ರಾಜ್ಯದಲ್ಲಿ ಶೇ.60ರಷ್ಟು ವಿದ್ಯುತ್ತನ್ನು ಜಲವಿದ್ಯುತ್ ಘಟಕಗಳು ಪೂರೈಸುತ್ತಿವೆ. ಈಗ ನೀರಿಲ್ಲದ ಕಾರಣ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಿವೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications