ಹಾಸ್ಯೋತ್ಸವದಲ್ಲಿ ದೇವಣ್ಣ, ಕುಮಾರಣ್ಣ.. ಜನ ನಕ್ಕರಣ್ಣ!
ಬೆಂಗಳೂರು : ಕ್ರಿಸ್ಮಸ್ ರಜೆಯನ್ನು ಬೆಂಗಳೂರು ಮಂದಿ ಸದ್ಬಳಕೆ ಮಾಡಿಕೊಂಡರು. ಜಯನಗರದ ಎಚ್ಚೆನ್ ಕಲಾಕ್ಷೇತ್ರಕ್ಕೆ ನುಗ್ಗಿದ ಜನ, ಬೆಳಗ್ಗೆಯಿಂದ ಸಂಜೆವರೆಗೆ ಬಿದ್ದುಬಿದ್ದು ನಕ್ಕರು.
ಕೊರವಂಜಿ-ಅಪರಂಜಿ ಟ್ರಸ್ಟ್ನ ಹಾಸ್ಯೋತ್ಸವದ ಯಶಸ್ಸಿಗೆ ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ನಗೆಪ್ರಿಯರೇ ಸಾಕ್ಷಿ. ಈ ವರ್ಷದ ಹಾಸ್ಯೋತ್ಸವದಲ್ಲಿ ಟಿ.ಸುನಂದಮ್ಮ ಅವರನ್ನು ಸ್ಮರಿಸಲಾಯಿತು. ಪ್ರೊ। ಅ.ರಾ. ಮಿತ್ರ, ಭುವನೇಶ್ವರಿ ಹೆಗಡೆ, ಬೇಲೂರು ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಹಾಸ್ಯಪಟುಗಳು, ಹಾಸ್ಯದ ಮಳೆ ಸುರಿಸಿದರು.
ಹಾಸ್ಯೋತ್ಸವದ ಕೆಲವು ತುಣುಕುಗಳು :
‘ದೇವೇಗೌಡರು ಪ್ರಧಾನಿಯಾಗಿದ್ದಾಗ ಸಭೆ-ಸಮಾರಂಭಗಳಲ್ಲಿಯೇ ನಿದ್ರೆ ಮಾಡುತ್ತಿದ್ದರು. ಯಾಕಂದರೆ, ಮಾಜಿ ಕೇಂದ್ರ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ರಾತ್ರಿಯಿಡೀ ದೇವೇಗೌಡರಿಗೆ ಹಿಂದಿ ಕಲಿಸುತ್ತಿ ದ್ದರು’ -ಹಿರಣ್ಣಯ್ಯ.
*
ದೇವೇಗೌಡರ ಮಗ ನೋಡಿದ್ರೆ, ಯಾರ್ಯಾರೋ ಮನೆಯಲ್ಲಿ ಮಲಗ್ತಾನೆ. ಅವರ ಮೊಮ್ಮಗ ನೋಡಿದ್ರೆ, ಕಂಡೋರ ಮನೆಗೆ ನುಗ್ಗಿ ಗಲಾಟೆ ಮಾಡ್ತಾನೆ... -ರವಿಬೆಳಗೆರೆ.
*
‘ಅತ್ತಿತ್ತ ನೋಡದಿರು.. ಮಲಗು ಮಗುವೇ...’ ಶೈಲಿಯಲ್ಲೊಂದು ಅಣಕು ಗೀತೆ..
‘ಅತ್ತಿತ್ತ ನೋಡದಿರು,
ಔಟ್ ಸೈಡ್ ಬ್ಯಾಡ್ ವೆದರ್...
ಹಾಲು ಅಲರ್ಜಿ ಮಗುವೇ,
ಕೋಲಾ- ಪೆಪ್ಸಿಯ ಕೊಡುವೆ,
ಕ್ಲಬ್ಗೆ ಹೋಗಿ ಬರುವೆ
ಮಲಗು ಮಗುವೇ,
ಡ್ಯೂಟಿಯ ಮುಗಿಸಿ ಡ್ಯಾಡಿ ಬರುತಾರೆ...
ಮಾತು ಕಲಿ ಮಗುವೇ,
ಮೊಬೈಲ್ ತಂದು ಕೊಡುವೆ...’
-ಪ್ರೊ। ಎಂ. ಕೃಷ್ಣೇಗೌಡ
*
ರೇವಣ್ಣನಿಗೆ ಸಕತ್ತು ಆಸೆ. ಏನು ಬಂದರೂ ನನ್ನ ಕ್ಷೇತ್ರಕ್ಕೆ ಜಾಸ್ತಿ ಬರಲಿ ಅನ್ನೋ ಅಪೇಕ್ಷೆ. ರೈತರ ಆತ್ಮಹತ್ಯೆಗೆ ನೆರವಾಗಲು 1000 ಹಗ್ಗಗಳು ಬಂದಿವೆ ಎಂದು ಅಧಿಕಾರಿಗಳು ಹೇಳಿದರೆ, ನನ್ನ ಕ್ಷೇತ್ರಕ್ಕೆ ಒಂದು 600ಕಳಿಸಿ ಅನ್ನುತ್ತಾನೆ! -ರವಿ ಬೆಳಗೆರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications