ಮಗನಿಗೆ ಭೋಗ ಲಾಲಸೆ ಮತ್ತು ಸಹವಾಸ ದೋಷ -ಎಚ್ಡಿಕೆ
ಬೆಂಗಳೂರು : ನಗರದ ಚರ್ಚ್ ಸ್ಟ್ರೀಟ್ನಲ್ಲಿರುವ ಚಿಕನ್ ಬಿರಿಯಾನಿ, ಕಬಾಬ್ಗೆ ತುಂಬಾ ಫೇಮಸ್ ಆಗಿರುವ ಎಂಪೈರ್ ಹೋಟೆಲ್ ಸಿಬ್ಬಂದಿಯಾಂದಿಗೆ ಜಗಳ ಕದನಕ್ಕಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಗೌಡ ಅವರ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತದೆ ಎಂಬ ಶಂಕೆಯನ್ನು ದಳದ ವಿರೋಧಿಗಳು ಹಬ್ಬಿಸುತ್ತಿದ್ದು, ಅವರ ಈ ಆರೋಪದಲ್ಲಿ ಹುರುಳಿಲ್ಲ ಎಂದು ಸ್ವತಃ ಕುಮಾರಸ್ವಾಮಿ ಶುಕ್ರವಾರ ಸಂಜೆ ಸುದ್ದಿಗಾರರ ಬಳಿ ಸ್ಪಷ್ಟಪಡಿಸಿದ್ದಾರೆ.
ಇಂದಿನ ಮಕ್ಕಳ ಗುಣ ಸ್ವಭಾದ ಬಗ್ಗೆ ಮಾತನಾಡಿದ ಕುಮಾರ್, ಐಶಾರಾಮಿ ಜೀವನ ಮತ್ತು ಸಹವಾಸದೋಷದಿಂದ ತಮ್ಮ ಮಗ ಹೀಗೆ ವರ್ತಿಸಿರಬಹುದು ಎಂದು ಹೇಳಿದ್ದಾರೆ.
ದೇವೇಗೌಡರ ಅಭಿಪ್ರಾಯ :
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಿಖಿಲ್ ಗೌಡ ಅವರ ತಾತ ಮಾಜಿ ಪ್ರಧಾನಿ ದೇವೇಗೌಡರು ಈ ವಿಷಯವನ್ನು ಮುಕ್ತವಾಗಿ ಪ್ರಸ್ತಾಪಿಸಿದ್ದಾರೆ.
‘ಇಂಥ ಪ್ರಕರಣಗಳು ದೇಶದಲ್ಲಿ ಬೇಕಾದಷ್ಟು ನಡೆದಿವೆ. ಇದು ಮೊದಲನೆಯದಲ್ಲ. ನನಗೆ ಗೊತ್ತಿದೆ. ಇದರಲ್ಲಿ ಒಳಗೆ-ಹೊರಗೆ ಎನುಂಟು, ಏನಿಲ್ಲ ಎಂಬುದು. ತಾರತಮ್ಯ ಮಾಡುವ ಪ್ರಶ್ನೆ ಇಲ್ಲ. ಕಾನೂನು ಪ್ರಕಾರ ಅದು ಏನಿದೆಯೋ ಅದು ನಡೆಯುತ್ತದೆ. ನಾವು ಈ ವಿಚಾರದಲ್ಲಿ ಅಧಿಕಾರಿಗಳಿಗೆ ಯಾವ ಸೂಚನೆಯನ್ನೂ ಕೊಟ್ಟಿಲ್ಲ ’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದ್ದಾರೆ.
ತಮ್ಮ ರಾಜಕೀಯ ವಿರೋಧಿಗಳು ಈ ಪ್ರಕರಣದ ದುರ್ಲಾಭ ಪಡೆಯಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿರುವ ದೇವೇಗೌಡರು, ತರಾತುರಿಯಲ್ಲಿ ತಮ್ಮ ವಿರೋಧಿಗಳು ಇನ್ನೊಬ್ಬ ಮಗ ರೇವಣ್ಣ ಅವರ ಮಗ ಪ್ರಜ್ವಲ್ನ ಭಾವಚಿತ್ರವನ್ನು ಓಡಿಹೋಗಿ ಪತ್ರಿಕೆಗಳಿಗೆ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಸಾರ್ವಜನಿಕರ ಅಭಿಪ್ರಾಯ :
ಈಗಿನ ಕಾಲದ ಮಕ್ಕಳೇ ಹೀಗೆ. ಲಂಗೂ ಇಲ್ಲ, ಲಗಾಮೂ ಇಲ್ಲ. ಹೇಳುವವರು ನಾವಿದ್ದೇವೆ, ಆದರೆ ಮಕ್ಕಳು ದೊಡ್ಡವರ ಮಾತುಗಳನ್ನು ಕಿವಿಗೂ ಹಾಕಿಕೊಳ್ಳುವುದಿಲ್ಲ. ಮುಖ್ಯಮಂತ್ರಿಮಗನಾದ್ದರಿಂದ ನಿಖಿಲ್ ಪ್ರಸಂಗ ಬೆಳಕಿಗೆ ಬಂತು. ಆದರೆ ಸಮಾಜದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹದಿಹರೆಯದವರ ವರ್ತನೆ ಅಂಕೆ ಮೀರುತ್ತಿದೆ ಎಂದು ಅನೇಕ ತಂದೆ ತಾಯಿಯರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ತಾನು ಮುಖ್ಯಮಂತ್ರಿ ಅವರ ಮಗ ಎಂದು ದರ್ಪದಿಂದ ನಿಖಿಲ್ ಗೌಡ ದುಂಡಾವರ್ತನೆಗೆ ಕೈಹಾಕಿರಬಹುದು. ಈಗಿನ ಕಾಲದ ಹುಡುಗರೇ ಹೀಗೆ. ನಮ್ಮ ಮನೆಯ ಮಕ್ಕಳೂ ಅಷ್ಟೆ. ಹೇಳಿಕೊಳ್ಳುವಷ್ಟು ಸಭ್ಯಸ್ಥರೇನಲ್ಲ ಎಂದು ರಾಜಾಜಿನಗರ ವಾಸಿ ನಿವೃತ್ತ ಪೋಲಿಸ್ ಅಧಿಕಾರಿ ಶಂಕರಪ್ಪ ದಟ್ಸ್ಕನ್ನಡ ವರದಿಗಾರರೊಂದಿಗೆ ಮಾತನಾಡುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.
ನಮ್ಮ ಮಕ್ಕಳೂ ರಾತ್ರಿ ಲೇಟಾಗಿ ಮನೆಗೆ ಬರ್ತಾರೆ. ಎಲ್ಲಿಗೆ ಹೋಗ್ತಾರೋ ಅದೇನು ಮಾಡ್ತಾರೋ ನೆನೆಸಿಕೊಂಡರೆ ಭಯವಾಗತ್ತೆ ಎಂಬ ಭಯವನ್ನು ಬಿಟಿಎಂ ಲೇಔಟ್ನ ಮೂರು ಮಕ್ಕಳ ತಾಯಿ ಮಾರ್ತಾ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಹೊಟೇಲ್
ಸಿಬ್ಬಂದಿ
Vs
ಸಿಎಂ
ಪುತ್ರ
ನಿಖಿಲ್
ಮಧ್ಯೆ
ಕದನ