ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾಗಪ್ಪ ಹತ್ಯೆ : ಸತ್ಯ ದಫನಕ್ಕೆ ಕಾಣದ ಕೈಗಳ ಸಂಚು’

By Staff
|
Google Oneindia Kannada News

ಚಾಮರಾಜನಗರ : ವೀರಪ್ಪನ್‌ ಒತ್ತೆಯಾಳಾಗಿದ್ದಾಗ ಅವರನ್ನು ಬಿಡಿಸಿಕೊಂಡು ಬರಲಾರದ ಸರ್ಕಾರ, ಅವರ ಹತ್ಯೆ ನಂತರ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ ಎಂದು ಪರಿಮಳಾ ನಾಗಪ್ಪ ಕಿಡಿ ಕಾರಿದರು. ಅಷ್ಟೇ ಅಲ್ಲದೆ, ನಾಗಪ್ಪ ಹತ್ಯೆ ಹಿಂದೆ ನಾಡಿನ ಕಾಣದ ಕೈಗಳು ಕೆಲಸ ಮಾಡಿವೆ ಎಂದು ನೇರವಾಗಿ ಆರೋಪಿಸಿದರು.

ಭಾನುವಾರ ತಮ್ಮ ಮನೆಯಲ್ಲಿ ಸುದ್ದಿಗಾರರೊಡನೆ ಮಾತಾಡಿದ ಪರಿಮಳ ನಾಗಪ್ಪ ದನಿ ಗದ್ಗದವಾಗಿತ್ತು. ಮಾತು ಮಾತಿನ ನಡುವೆ ಬಿಕ್ಕುವಿಕೆ; ಕಣ್ಣಲ್ಲಿ ನೀರು.

ಪರಿಮಳಾ ನಾಗಪ್ಪ ಹೇಳಿದ್ದಿಷ್ಟು-
‘ನಾಗಪ್ಪನವರು ಕಾಡಿನಿಂದ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದರೆ ಹಲವಾರು ಸತ್ಯಗಳು ಹೊರಕ್ಕೆ ಬರುತ್ತವೆ ಅಂತ ಹೆದರಿದ್ದವರೇ ಅವರ ಹತ್ಯೆಗೆ ಕಾರಣರು. ಅಂಥವರಿಂದ ನಮ್ಮ ಕುಟುಂಬದವರಿಗೆ ಬೆದರಿಕೆ ಕರೆಗಳು ಬರತೊಡಗಿವೆ.

ವೀರಪ್ಪನ್‌ನಿಂದ ನಾಗಪ್ಪನವರಿಗೆ ಅಪಾಯವಿದೆ ಅಂತ ಸರ್ಕಾರಕ್ಕೆ ಗೊತ್ತಿತ್ತು. ಆಗ ‘ವೈ’ ಶ್ರೇಣಿಯ ಭದ್ರತೆ ಒದಗಿಸುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದರು. ಆದರೆ ಸರ್ಕಾರ ಕೆಲಸಕ್ಕೆ ಬಾರದ ಒಬ್ಬ ಪೇದೆಗೆ ರಿಪೇರಿ ಮಾಡಿದ ಗನ್‌ ಕೊಟ್ಟು ಕಳುಹಿಸಿತು. ನಾಗಪ್ಪ ಹತ್ಯೆಯಾದ ನಂತರ ಈಗ ನಮಗೆ ಭಾರೀ ಭದ್ರತೆ. ಇದು ಯಾವ ಪುರುಷಾರ್ಥಕ್ಕೆ?

‘ಸತ್ಯವಾನ್‌ ಸಾವಿತ್ರಿಯಂತೆ ನಾನು ವೀರಪ್ಪನ್‌ನಿಂದ ಹಿಡಿದು ಎಲ್ಲರಲ್ಲೂ ತಾಳಿ ಭಿಕ್ಷೆ ಬೇಡಿದೆ. ಆದರೆ ನನ್ನ ಯತ್ನಕ್ಕೆ ಫಲ ಸಿಗಲಿಲ್ಲ. ವೀರಪ್ಪನ್‌ ನನ್ನ ಪತಿಯನ್ನು ಕೊಂದನೋ ಇಲ್ಲವೋ ಗೊತ್ತಿಲ್ಲ. ಆದರೆ, ಅಪಹರಿಸಿದ್ದು ಅವನೇ ಆದ್ದರಿಂದ ಯಾರೇ ಕೊಂದಿದ್ದರೂ ಅದಕ್ಕೆ ವೀರಪ್ಪನ್‌ ಕಾರಣನಾಗುತ್ತಾನೆ’.

ಅಸೆಂಬ್ಲಿಯಲ್ಲಿ ಅಸಂಬದ್ಧ ಚರ್ಚೆ : ನನ್ನ ಪತಿ ಅಮಾನುಷವಾಗಿ ಕೊಲೆಯಾಗಿದ್ದಾರೆ. ಇಂಥಾ ಗಂಭೀರ ವಿಷಯವನ್ನು ಅಸೆಂಬ್ಲಿಯಲ್ಲಿ ಅಸಂಬದ್ಧವಾಗಿ ಚಿರ್ಚಸಲಾಗುತ್ತಿದೆ. ಶಾಸಕ ವೈ.ಕೆ.ರಾಮಯ್ಯನವರು ನನ್ನನ್ನು 123ನೇ ವಿಧವೆ ಅಂತ ಹೇಳಿದ್ದಾರೆ. ವೀರಪ್ಪನ್‌ನಿಂದ ಇವರ ಮನೆಯಲ್ಲಿ 124ನೇ ವಿಧವೆ ಸೃಷ್ಟಿಯಾದರೆ ನನ್ನ ನೋವು ಏನೂಂತ ಅವರಿಗೆ ಅರ್ಥವಾಗುತ್ತದೆ ಎನ್ನುವಷ್ಟರಲ್ಲಿ ಪರಿಮಳ ನಾಗಪ್ಪ ಬಿಕ್ಕಿ ಬಿಕ್ಕಿ ಅಳತೊಡಗಿದರು.

ಸಿಬಿಐ ತನಿಖೆ ಯಾಕೆ ಕೂಡದು ? : ಸತ್ಯ ಹೊರಬರಬೇಕು ಅನ್ನೋದೇ ನಮ್ಮೆಲ್ಲರ ಆಸೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸರ್ಕಾರ ಹಿಂಜರಿಯುತ್ತಿರೋದು ಯಾಕೆ : ಅನೇಕರ ಬಂಡವಾಳ ಬಯಲಾಗುತ್ತದೆ ಅಂತ ಭಯವೇ ಎಂದು ಪರಿಮಳ ಪ್ರಶ್ನಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X