ಗೊರವನಹಳ್ಳಿಯ ಸ್ಫೂರ್ತಿಲಕ್ಷ್ಮಿ ಕಮಲಮ್ಮ ನಿಧನ
ಕೊರಟಗೆರೆ : ಕರ್ನಾಟಕದ ಕೊಲ್ಹಾಪುರ ಎಂದೇ ಹೆಸರಾದ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲವನ್ನು ರೂಢಿಸಿದ್ದ ಶ್ರೀ ಮಹಾಲಕ್ಷ್ಮಿ ಟ್ರಸ್ಟ್ ಸಂಸ್ಥಾಪಕಿ ಕಮಲಮ್ಮ ಅವರು ಭಾನುವಾರ (ಡಿ.22) ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು .
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಕಮಲಮ್ಮ ಗೊರವನಹಳ್ಳಿಯ ಶ್ಯಾನುಭೋಗ ಸುಬ್ಬರಾಯಪ್ಪ ಅವರನ್ನು ಮದುವೆಯಾಗುವ ಮೂಲಕ ಗೊರವನಹಳ್ಳಿಯ ಸೊಸೆಯಾದರು. 1962 ರಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಸಂಸ್ಥಾಪನೆಗೆ ಅವರು ಕಾರಣರಾದರು.
ಕಮಲಮ್ಮ ಅವರ ಮುಂದಾಳತ್ವದಲ್ಲಿ 1988 ರಲ್ಲಿ ಸ್ಥಾಪನೆಯಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ದೇವಸ್ಥಾನದ ಅಭಿವೃದ್ಧಿ ಮಾತ್ರವಲ್ಲದೆ, ಜನಪರ ಚಟುವಟಿಕೆಗಳನ್ನು ತೊಡಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರನ್ನು ಗೊರವನಹಳ್ಳಿ ಆಕರ್ಷಿಸುತ್ತಿದ್ದು , ಪ್ರತಿದಿನವೂ ಇಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿದೆ.
ಕಮಲಮ್ಮ ಅವರ ಅಪೇಕ್ಷೆಯಂತೆ ಅವರು ವಾಸಿಸುತ್ತಿದ್ದ ಮನೆಯಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಶಾಸಕ ಸಿ.ಚೆನ್ನಿಗಪ್ಪ ಕಮಲಮ್ಮನವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...