ಸದ್ಯದಲ್ಲೇ ‘ವೀರಪ್ಪನ್ ಸಂತ್ರಸ್ತ’ ರ ಸಮಾವೇಶ
ಮೈಸೂರು: ವೀರಪ್ಪನ್ನಿಂದ ಹತ್ಯೆಗೀಡಾದವರ ಕುಟುಂಬದ ಸದಸ್ಯರ ಸಮಾವೇಶವಂದನ್ನು ಆಯೋಜಿಸಲು ನಿವೃತ್ತ ಡಿವೈಎಸ್ಪಿ ಅಬ್ದುಲ್ ಕರೀಂ ನಿರ್ಧರಿಸಿದ್ದಾರೆ.
ಮಾಜಿ ಸಚಿವ ನಾಗಪ್ಪ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಸರಕಾರವನ್ನು ಆಗ್ರಹಿಸಲು ವೀರಪ್ಪನ್ ಸಂತ್ರಸ್ತರ ಸಮಾವೇಶ ನಡೆಸಲು ಅಬ್ದುಲ್ ಕರೀಂ ತಯಾರಿ ನಡೆಸುತ್ತಿದ್ದಾರೆ. ಸೋಮವಾರದಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿದ ನಂತರ ಕರೀಂ ವೀರಪ್ಪನ್ ಸಂತ್ರಸ್ತರ ಸಭೆ ನಡೆಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋಮವಾರ ಸಂಜೆ ಜೆಎಸ್ಎಸ್ ರಾಜೇಂದ್ರ ಭವನದಲ್ಲಿ ನಡೆದ ಪ್ರತಿಪಕ್ಷಗಳ ಸಭೆ ಕೂಡ ನಾಗಪ್ಪ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿಕೊಂಡಿದೆ. ಅಲ್ಲದೆ ಸರಕಾರದ ಮೇಲೆ ಒತ್ತಡ ಹೇರಲು ಮೈಸೂರು, ಚಾಮರಾಜ ನಗರ ಮತ್ತು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲು ಸಭೆ ನಿರ್ಧರಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮೈಸೂರು ವಿಭಾಗದಲ್ಲಿ ಒಕ್ಕರಲಿನ ದನಿ ಕೇಳಿಸುತ್ತಿದೆ.
ನಾಗಪ್ಪ ಹತ್ಯೆ ಎರಡೂ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ರಾಜ್ಯಕೈಗೊಳ್ಳುವ ತನಿಖೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬೀಳಬಹುದು ಎಂಬ ಅಭಿಪ್ರಾಯ ಸ್ವಾಮೀಜಿಯವರದ್ದು ಎಂದ ಕರೀಂ ವೀರಪ್ಪನ್ ಸಂತ್ರಸ್ತರ ಸಮಾವೇಶದ ದಿನಾಂಕ ಹಾಗೂ ಸ್ಥಳಗಳನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ