ರಾಜ್ಯದ ನ್ಯಾಯಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿದೆ- ಸಲ್ಡಾನಾ
*ಸದಾಶಿವ ಕೆ.
ಮಂಗಳೂರು : ನ್ಯಾಯಾಂಗ ವ್ಯವಸ್ಥೆ ಮೇಲಿರುವ ಸಾರ್ವಜನಿಕರ ವಿಶ್ವಾಸ ಕಳೆಗುಂದದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಎಂ. ಎಫ್.ಸಲ್ಡಾನಾ ಕಿವಿ ಮಾತು ಹೇಳಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಿಂದ ಸಾರ್ವಜನಿಕರ ಅಪೇಕ್ಷೆಗಳು ಎಂಬ ವಿಷಯದ ಬಗ್ಗೆ ಅವರು ಶನಿವಾರ ಉಪನ್ಯಾಸ ನೀಡಿದರು. ಇತ್ತೀಚೆಗೆ ಮೈಸೂರು ವಿಹಾರ ಧಾಮದಲ್ಲಿ ನಡೆದಿದೆ ಎನ್ನಲಾದ ನ್ಯಾಯಾಂಗ ವ್ಯವಸ್ಥೆಯ ಉನ್ನತ ವ್ಯಕ್ತಿಗಳ ರಾಸಲೀಲೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಲ್ಡಾನಾ, ಇಂತಹ ಹಗರಣಗಳಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕರಿ ನೆರಳು ಬಿದ್ದಂತಾಗಿದೆ. ಇದರಿಂದಾಗಿ ಇಡೀ ವ್ಯವಸ್ಥೆಯೇ ವಿಚಾರಣೆ ಎದುರಿಸುವಂತಾಗಿದೆ ಎಂದರು.
ಉಪನ್ಯಾಸದಲ್ಲಿ ಸಲ್ಡಾನಾ ಅವರು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಮಾತಿನ ಉದ್ದಕ್ಕೂ ಅವರು ಮಾಧ್ಯಮದ ಪರವಾಗಿದ್ದಂತೆ ಕಂಡು ಬಂತು.
ಮೈಸೂರು ರೆಸಾರ್ಟ್ ಪ್ರಕರಣದ ಬಗ್ಗೆ ಹೆಚ್ಚುವರಿ ತನಿಖೆಯನ್ನು ಸ್ವಾಗತಿಸಿದ ಸಲ್ಡಾನಾ, ಇವೆಲ್ಲದರ ಹೊರತಾಗಿಯೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ದ ನ್ಯಾಯಾಂಗ ವ್ಯವಸ್ಥೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶೆ ಇಂದ್ರಕಲಾ, ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಂ. ಆರ್. ಬಲ್ಲಾಳ್, ಧರ್ಮಸ್ಥಳ ಕಾನೂನು ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಮುಖಪುಟ / ಇವತ್ತು... ಈ ಹೊತ್ತು...