ಬೆಳ್ಳಕ್ಕಿ ಸಾಲು ಹಾರಿ, ಹಾರಿ ಬೆಳ್ಳೂರ್ಗೆ ಬಂದೈತೇ....
* ಮದ್ದೂರು ರವಿಶಂಕರ್
ಮಂಡ್ಯ : ಈ ಹೊತ್ತು ಹ್ಹ. ಹ...ಹ... ಎನ್ನುವಂತೆ ಚಳಿ ಕೊರೆಯುತ್ತಿದೆ. ಚಳಿಗಾಲ ಬರುತ್ತಿದ್ದಂತೆಯೇ ನಾಗಮಂಗಲದ ಬಳಿಯ ಕೊಕ್ಕರೆ ಬೆಳ್ಳೂರಿಗೆ ದೂರದೂರುಗಳಿಂದ ಬಿಳಿಯ ಅತಿಥಿಗಳು ಆಗಮಿಸುತ್ತಾರೆ. ಈ ವರ್ಷವೂ ಇವರ (ಅರ್ಲಿ ಬರ್ಡ್ಸ್) ಆಗಮನ ಆರಂಭವಾಗಿದೆ.
ಕರ್ನಾಟಕ ಪಕ್ಷಿಗಳಿಗೆ ಕಾಶಿ ಇದ್ದಂತೆ. ರಾಜ್ಯದ ಹವಾಮಾನ ಹಕ್ಕಿ ಪಕ್ಷಿಗಳಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗೇ ಶ್ರೀರಂಗಪಟ್ಟಣ ಬಳಿಯ ವಿಶ್ವವಿಖ್ಯಾತ ರಂಗನತಿಟ್ಟು, ಶಿವಮೊಗ್ಗ ಸನಿಹದ ಮಂಡಗದ್ದೆ, ಶಿರಾ ಬಳಿಯ ಕಗ್ಗಲಡು, ಧಾರವಾಡ ಸಮೀಪದ ಬೇಲೂರು, ನಾಗಮಂಗಲ ಬಳಿಯ ಕೊಕ್ಕರೆ ಬೆಳ್ಳೂರು, ಗುಡಿಬಂಡೆ ಸಮೀಪದ ವೀರಾಪುರಂಗೆ ಪ್ರತಿವರ್ಷ ದೂರದೂರದ ಊರುಗಳಿದಂ ಹಕ್ಕಿಗಳು ಬಂದು ಬೀಡು ಬಿಡುತ್ತವೆ.
ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ, ಮರಿಗಳನ್ನು ಪೋಷಿಸಿ, ಮರಿಗಳಿಗೆ ಹಾರುವ ಶಕ್ತಿ ಬಂದೊಡನೆ ಮತ್ತೆ ತವರಿನತ್ತ ಪ್ರಯಾಣ ಬೆಳೆಸುತ್ತವೆ. ಈ ವರ್ಷವೂ ಹಾಗೆ. ಈಗಾಗಲೇ ಬೆಳ್ಳೂರಿನಲ್ಲಿ ಹಕ್ಕಿಗಳ ಚಟುವಟಿಕೆ ಆರಂಭವಾಗಿದೆ.
ನೈಟ್ ಹೆರಾನ್, ಪರ್ಪಲ್ ಹೆರಾನ್, ರಿವರ್ ಟರ್ನ್, ಸ್ನೇಕ್ಬರ್ಡ್, ಪೆಲಿಕಾನ್, ಪೈಂಟೆಡ್ ಸ್ಟಾರ್ಕ್, ಮೊದಲಾದ ಹಕ್ಕಿಗಳು ಬರುತ್ತಿವೆ. ಹಚ್ಚಹಸುರಿನ ಗಿಡಮರಗಳ ಮೇಲೆ ಮಾರುದ್ದದ ರೆಕ್ಕೆಯನ್ನು ಬಿಚ್ಚಿ ಹಾರುತ್ತಾ ಬಂದು ಕೂರುವ ಶ್ವೇತವರ್ಣದ ಕೆಂಪುಕೊಕ್ಕಿನ ಈ ಪಕ್ಷಿಗಳನ್ನು ನೋಡುವುದೇ ಒಂದು ಆನಂದ.
ಸೈಬೀರಿಯಾ, ರಷ್ಯಾ, ಅಮೆರಿಕಾ ಮೊದಲಾದ ದೂರದ ಪ್ರದೇಶಗಳಿಂದ ಹಾರಿಬಂದಿರುವ ಈ ಅತಿಥಿ - ಅಭ್ಯಾಗತರನ್ನು ಕಾಣಲೆಂದೇ ನೂರಾರು ಪ್ರವಾಸಿಗರು ಈಗಾಗಲೇ ಬೆಳ್ಳೂರಿಗೆ ಆಗಮಿಸುತ್ತಿದ್ದಾರೆ. ಚಪ್ಪಟೆ ಕೊಕ್ಕಿನ, ಉದ್ದ ಮೂತಿಯ ಹಾಗೂ ಕೊಕ್ಕಿನ ಕೆಳಗೆ ನಸುಗೆಂಪು ವರ್ಣದ ಚೀಲವನ್ನು ಹೊಂದಿರುವ ವಿವಿಧ ಬಗೆಯ ಹಕ್ಕಿಗಳ ಆಟವನ್ನು ಕಣ್ಣಾರೆ ಕಂಡು ಆನಂದಿಸುತ್ತಿದ್ದಾರೆ.
ಬಹುತೇಕ ಆಗಸ್ಟ್ ತಿಂಗಳವರೆಗೆ ಇಲ್ಲಿ ಬೀಡುಬಿಡುವ ಈ ಪಕ್ಷಿಗಳ ಸಂಖ್ಯೆ ಮುಂದಿನ ಒಂದೆರಡು ತಿಂಗಳಲ್ಲಿ 7-8 ಸಾವಿರವನ್ನೂ ಮುಟ್ಟುತ್ತದೆ. ಹಲವು ವರ್ಷಗಳಿಂದ ಇಲ್ಲಿನ ಹಳ್ಳಿಗರು ಈ ಅತಿಥಿಗಳಿಗೆ ಭವ್ಯ ಸ್ವಾಗತವನ್ನೇ ನೀಡುತ್ತಾ ಬಂದಿದ್ದಾರೆ. ಪಕ್ಷಿಗಳನ್ನು ತಮ್ಮ ಕಂದಮ್ಮಗಳಂತೆ ಕಾಣುತ್ತಾರೆ.
ಪ್ರವಾಸಿಗರು : ಹೋದ ವರ್ಷ (2000ದಲ್ಲಿ) ಕೊಕ್ಕರೆ ಬೆಳ್ಳೂರಿನ ಸೊಬಗನ್ನು ಕಾಣಲು 30 ಸಾವಿರಕ್ಕೂ ಹೆಚ್ಚು ದೇಶೀ -ವಿದೇಶೀ ಪ್ರವಾಸಿಗರು ಆಗಮಿಸಿದ್ದರು. ಈ ವರ್ಷ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂಬುದು ಗ್ರಾಮಸ್ಥರ ನಿರೀಕ್ಷೆ. ಆದರೆ, ಈ ಸುಂದರ ಪರಿಸರದಲ್ಲಿ ಜಿಂಕೆ ಉದ್ಯಾನ, ಮನರಂಜನಾ ಪಾರ್ಕ್, ಪ್ರವಾಸಿಗರಿಗೆ ಕುಟೀರ, ಪಕ್ಷಿವೀಕ್ಷಣಾ ಗೋಪುರ, ಬೋಟಿಂಗ್ ಇತ್ಯಾದಿ ಸೌಲಭ್ಯ ಒದಗಿಸಿ, ಅಭಿವೃದ್ಧಿ ಪಡಿಸಿದರೆ, ಕೊಕ್ಕರೆ ಬೆಳ್ಳೂರು ವಿಶ್ವಭೂಪಟದಲ್ಲಿ ಶಾಶ್ವತ ಹೆಸರು ಗಳಿಸುತ್ತದೆ ಎಂಬುದು ಸ್ಥಳೀಯರ ಆಶಯ. ಈ ಬಗ್ಗೆ ಸರಕಾರ ಗಮನಕೊಡಬೇಕಷ್ಟೇ.
ಬೆಳ್ಳೂರಿಗೆ ಹೋಗುವುದು ಹೇಗೆ? ಬೆಂಗಳೂರು -ಮೈಸೂರು ರಸ್ತೆಯಲ್ಲಿ ಸಿಗುವ ಮದ್ದೂರಿನಿಂದ ಕೇವಲ 10 ಕಿ.ಮೀಟರ್ ದೂರದಲ್ಲಿರುವ ಕೊಕ್ಕರೆ ಬೆಳ್ಳೂರಿಗೆ ಹೋಗಲು ಬಸ್ ಸೌಕರ್ಯ ಇದೆ. ಮೈಸೂರಿನಿಂದ 50 ಕಿ.ಮೀಟರ್ ದೂರದಲ್ಲಿರುವ ಈ ಪುಟ್ಟ ಗ್ರಾಮ, ಎತ್ತರದ ಮರಗಳು ಹಾಗೂ ಸುತ್ತಮುತ್ತ ಕೆರೆ, ಕೊಳ ಮತ್ತು ಕುಂಟೆಗಳನ್ನು ಒಳಗೊಂಡಿದ್ದು, ಪಕ್ಷಿಗಳನ್ನು ಆಕರ್ಷಿಸುವ ತಾಣವಾಗಿದೆ. ತಂಗಲು ಮದ್ದೂರಿನಲ್ಲಿ ಪಿಡಬ್ಲ್ಯುಡಿಯ ಅತಿಥಿಗೃಹ ಇದೆ. ಮದ್ದೂರಿನಿಂದ ಮಂಡ್ಯಕ್ಕೆ ಕೇವಲ 21 ಕಿ.ಮೀಟರ್.
ವಾರ್ತಾ
ಸಂಚಯ
ಮುಖಪುಟ
/
ನೋಡು
ಬಾ
ನಮ್ಮೂರ