ರಾಜ್ ಅಪಹರಣ ಪ್ರಕರಣ : ಸಿಬಿಐ ತನಿಖೆಗೆ ವಾಟಾಳ್ ಒತ್ತಾಯ
ಬೆಂಗಳೂರು : ಹದಿನೈದು ದಿನಗಳ ಗಡುವು ಕೊಡುತ್ತೇನೆ. ಡಾ।ರಾಜ್ಕುಮಾರ್ ಅಪಹರಣ ಮತ್ತು ಬಿಡುಗಡೆ ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು. ಇಲ್ಲವಾದರೆ ಚಳವಳಿ ಪ್ರಾರಂಭಿಸುವೆ ಎಂದು ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ಅವರು, ವೀರಪ್ಪನ್ ಕಳುಹಿಸಿರುವ ಕೆಸೆಟ್ಗಳೆಷ್ಟು, ಅವು ತಮಿಳುನಾಡು ಸರ್ಕಾರದ ವಶದಲ್ಲಿವೆಯೋ ಅಥವಾ ಕರ್ನಾಟಕದಲ್ಲೇ ಇವೆಯೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಕುಮಾರ್ ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಪ್ರಕರಣದ ವಿಷಯಗಳು ಮಾತ್ರ ಇನ್ನೂ ನಿಗೂಢ. ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಡುವೆ ನಡೆದಿರುವ ಆಂತರಿಕ ಮಾತುಕತೆಗಳೇನು ಎಂಬುದೂ ಗೊತ್ತಾಗಿಲ್ಲ. ಪ್ರಾಮಾಣಿಕ ತನಿಖೆ ನಡೆದರೆ ಸರ್ಕಾರಕ್ಕೆ ರಾಜೀನಾಮೆ ಕೊಡುವ ಪ್ರಸಂಗ ಬರುವುದು ಖಂಡಿತ. ಈ ಕಾರಣಕ್ಕೇ ಇಡೀ ಪ್ರಕರಣವನ್ನು ಬೆಳಕಿಗೆ ತಂದಿಲ್ಲ. ಸಿಬಿಐ ತನಿಖೆಯಾದಲ್ಲಿ ಎಲ್ಲಾ ಸತ್ಯಾಂಶಗಳು ಹೊರ ಬರುತ್ತವೆ ಎಂದರು.
ಕಿಡಿ : ಇದೇ ವಾಟಾಳ್ ರಾಜ್ ಬಿಡುಗಡೆಯಾಗಿ ಬಂದ ನಂತರ ಇದೇ ರೀತಿ ಆಗ್ರಹ ಮಾಡಿ, ಚೀರಿದ್ದರು. ಆದರೆ ಆಗಿರುವ ಚಳವಳಿ ಎಂಥದು ಎಂಬುದು ಅಗೋಚರ! ವೀರಪ್ಪನ್ ಸುತ್ತ ಮುತ್ತಲ ಕಾಕಸ್ ಸಿಕ್ಕಿಕೊಳ್ಳುತ್ತಾ, ನಕ್ಕೀರನ್ ಗೋಪಾಲ್ ಬಂಡವಾಳ ಬಯಲಾಗುತ್ತಿರುವ ಈ ಹೊತ್ತಲ್ಲಿ ವಾಟಾಳ್ ಆಗ್ರಹಿಸುತ್ತಿರುವುದರಲ್ಲಿ ಅಚ್ಚರಿಯಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...