ಮಡಿಕೇರಿಉದ್ರಿಕ್ತ : ರಾಷ್ಟ್ರಗೀತೆ ಹಾಡಲು ವಿದ್ಯಾರ್ಥಿಗಳ ನಕಾರ
ಮಡಿಕೇರಿ: ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇಲ್ಲಿನ ಬ್ಲಾಸಂ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಶಾಲಾಡಳಿತ ಅಮಾನತುಗೊಳಿಸಿದೆ.
ಹತ್ತನೇ ತರಗತಿಯ ವಿದ್ಯಾರ್ಥಿ ಕೆ.ಎಲ್.ಜಿತಿನ್ ಹಾಗೂ ಆರ್.ರಾಬಿನ್ ಮತ್ತು 8 ನೇ ತರಗತಿಯ ಕೆ.ಎಲ್. ನಿತಿನ್ ಅಮಾನತುಗೊಂಡಿರುವ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಜೆಹೋವಾಸ್ ವಿಟ್ನೆಸಸ್ ಬಣಕ್ಕೆ ಸೇರಿದವರು ಎನ್ನಲಾಗಿದೆ.
ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ವಿದ್ಯಾರ್ಥಿಗಳು, ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿದ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ಒತ್ತಾಯವನ್ನು ತಳ್ಳಿಹಾಕಿದರು. ಜೆಹೋವಾನ ಅನುಯಾಯಿಗಳಾದ ತಾವು ಜೆಹೊವಾ ಗೀತೆಗಳ ಹೊರತಾಗಿ ಬೇರೆ ಗೀತೆಗಳನ್ನು ಹಾಡುವುದಿಲ್ಲವೆಂದು ಈ ಮೂವರು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಶಾಲೆಗೆ ಮುತ್ತಿಗೆ, ಪ್ರತಿಭಟನೆ
ರಾಷ್ಟ್ರಗೀತೆ ಹಾಡಲು ವಿದ್ಯಾರ್ಥಿಗಳು ನಿರಾಕರಿಸಿದ ಸುದ್ದಿ ಪಟ್ಟಣದಲ್ಲಿ ಹರಡಿ, ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳ ನಡವಳಿಕೆಯನ್ನು ಪ್ರತಿಭಟಿಸಿದರು. ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ, ಪಟ್ಟಣದಲ್ಲಿ ಬಿಗು ವಾತಾವರಣ ಮುಂದುವರಿದಿದೆ.
ರಾಷ್ಟ್ರಗೀತೆ ಹಾಡಲು ನಿರಾಕರಿಸಿರುವ ವಿದ್ಯಾರ್ಥಿಗಳ ನಡವಳಿಕೆಯನ್ನು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಜಿಲ್ಲಾಧಿಕಾರಿಗಳು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಾಧ್ಯಕ್ಷರಾಗಿರುವ ಶಾಲೆಯಲ್ಲಿ ಇಂಥ ಘಟನೆ ನಡೆದಿರುವುದು ಖಂಡನಾರ್ಹ ಎಂದು ಬಿಜೆಪಿ ಹಾಗೂ ವಿಎಚ್ಪಿ ನಾಯಕರು ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...