ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ವಿಜಯಪುರವರೆಗೆ ದೈನಂದಿನ ರೈಲುಗಳು ಸಂಚಾರ ಮಾಡುತ್ತಿವೆ. ಈ ಮಧ್ಯೆ ವರ್ಷಗಳಿಂದಲೂ ಈ ಮಾರ್ಗದಲ್ಲಿ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಬೇಕು ಎಂಬ ಆಗ್ರಹ ಜೋರಾಗಿದೆ. ಗದಗ ಜಂಕ್ಷನ್ ಕಡೆಯಿಂದ ವಿಜಯಪುರವರೆಗೆ ಹೊಸ ಮಾರ್ಗದಲ್ಲಿ ನಡೆಯುತ್ತಿದ್ದ ರೈಲು ಹಳಿ ಡಬ್ಲಿಂಗ್ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಆಗ್ರಹ ಮತ್ತಷ್ಟು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ರೈಲ್ವೆ ಸಚಿವರಿಗೆ ಪತ್ರದ ಮೂಲಕ ಕೋರಿದ್ದಾರೆ.
ಉತ್ತರ ಕರ್ನಾಟಕದ ಆಲಮಟ್ಟಿ-ವಂಡಾಳ್ ನಡುವಿನ 9.60 ಕಿಲೋ ಮೀಟರ್ ಉದ್ದ ಜೋಡಿಹಳಿ ಕಾಮಗಾರಿ ಮುಗಿದು, ಮಾರ್ಚ್ 25ರಿಂದ ಸಂಚಾರಕ್ಕೆ ಮುಕ್ತವಾಗಿದೆ. ಆದ್ದರಿಂದ ಬೆಂಗಳೂರು-ವಿಜಯಪುರ ನಡುವೆ ಬಹುಕಾಲದ ಬೇಡಿಕೆಯಾಗಿರುವ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಬೇಕು ಎಂದು ಕೋರಿರುವ ಎಂಬಿ ಪಾಟೀಲ್ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.

ಬಾಗಲಕೋಟೆ, ವಿಜಯಪುರ ಜನರಿಗೆ ಅನುಕೂಲ
ಇತ್ತೀಚೆಗೆ ಗದಗ-ಹೊಟಗಿ ಹಳಿ ಡಬ್ಲಿಂಗ್ ಯೋಜನೆಯ ಭಾಗವಾದ ಆಲಮಟ್ಟಿ-ವಂಡಾಳ್ ನಡುವಿನ ಕಾಮಗಾರಿ ಈಗ ಮುಗಿದಿದೆ. ಇದು ಮುಗಿದರೆ ಬೆಂಗಳೂರು-ವಿಜಯಪುರ ನಡುವೆ ಎಕ್ಸ್ಪ್ರೆಸ್ ರೈಲು ಆರಂಭಿಸಬಹುದು ಎಂದು ಹಿಂದಿನ ಭೇಟಿಯಲ್ಲಿ ಹೇಳಿದ್ದಿರಿ. ಈಗ ಇದಕ್ಕೆ ಆದ್ಯತೆ ಕೊಡಬೇಕು. ಶೈಕ್ಷಣಿಕ, ವೈದ್ಯಕೀಯ, ಆಡಳಿತಾತ್ಮಕ, ವಾಣಿಜ್ಯ ವಹಿವಾಟು ಇತ್ಯಾದಿಗಳಿಗೆ ನಿತ್ಯವೂ ಬೆಂಗಳೂರಿಗೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಸೇರಿ ಕೆಲವು ಜಿಲ್ಲೆಗಳ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದಿದ್ದಾರೆ.
ಬೈಪಾಸ್ ಮಾರ್ಗಗಳಲ್ಲಿ ಸಂಚರಿಸಲಿ, ಸಂಚಾರ ಸಮಯ ಇಳಿಸಿ
ಇದೇ ರೀತಿಯಲ್ಲಿ ಈಗ ಎರಡೂ ನಗರಗಳ ನಡುವೆ ರೈಲು ಪ್ರಯಾಣಕ್ಕೆ 15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದು ಅನನುಕೂಲಕ್ಕೆ ಕಾರಣವಾಗಿದೆ. ಇದನ್ನು 10 ಗಂಟೆಗಳಿಗೆ ಇಳಿಸಬೇಕಾದ ಜರೂರಿದೆ. ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಹುಬ್ಬಳ್ಳಿಯ ತನಕ ನಿಗದಿತ ನಿಲುಗಡೆ ನೀಡುವುದು. ನಂತರ ವಿಜಯಪುರಕ್ಕೆ ಸಾಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೈಪಾಸ್ ಮಾರ್ಗವಾಗಿ ಅನುಮತಿಗೆ ಕೋರಿಕೆ
ಕಳೆದ ಫೆಬ್ರವರಿ ತಿಂಗಳಿನಿಂದ ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು (06503) ಎಸ್ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಸಂಚರಿಸುತ್ತಿದೆ. ಈ ರೈಲು ಹುಬ್ಬಳ್ಳಿ-ಗದಗ ಬೈಪಾಸ್ ಮೇಲೆ ಸಂಚರಿಸಲು ಈವರೆಗೆ ಇದ್ದ ಮೂಲಸೌಕರ್ಯದ ತೊಡಕು ನಿವಾರಣೆ ಆಗಿದೆ. ಹೀಗಾಗಿ ಜನರ ಕೋರಿಕೆಯಂತೆ ಈ ಮಾರ್ಗದಲ್ಲಿ ಓಡಿಸಲು ಅನುಮತಿ ನೀಡಬೇಕೆಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಶೀಘ್ರವೇ ರೈಲ್ವೆ ಸಚಿವರಿಂದ ಅಧಿಕೃತ ಮಾಹಿತಿ ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications