ಕೃಷ್ಣ ತವರು ಜಿಲ್ಲೆ ಮಂಡ್ಯದಲ್ಲಿ ಹೆಚ್ಚುತ್ತಿರುವ ಎಚ್ಐವಿ ಸೋಂಕು
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಿಂದ ಎಚ್ಐವಿ ಪಾಜಿಟಿವ್ ರೋಗಾಣು ಹೊಂದಿರುವ ಸರಾಸರಿ 4 ಮಂದಿ ಪ್ರತಿ ವಾರ ನಗರದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎನ್ನುವ ಕುತೂಹಲಕಾರಿ ವರದಿಯನ್ನು ಎಕ್ಸ್ಪ್ಲಾಸಿಟಿ.ಕಾಂ ಪ್ರಕಟಿಸಿದೆ.
1998 ರಿಂದಲೂ ಮಂಡ್ಯ ಹಾಗೂ ಸನಿಹದ ಚನ್ನಪಟ್ಟಣದಿಂದ ಎಚ್ಐವಿ ಪೀಡಿತ ರೋಗಿಗಳು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಸೇರುವುದು ಸಾಮಾನ್ಯವಾಗಿದೆ ಎಂದು ಸೇವಾ ಫ್ರೀ ಕ್ಲಿನಿಕ್ನ ದೈಹಿಕ ತಜ್ಞ ಬಿ. ಸತೀಶ್ ಅವರ ಹೇಳಿಕೆ ಉಲ್ಲೇಖಿಸಿದ ವರದಿ ತಿಳಿಸಿದೆ. ಸೇವಾ ಫ್ರೀ ಕ್ಲಿನಿಕ್ ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ಏಡ್ಸ್ ರೋಗಿಗಳನ್ನು ಉಪಚರಿಸುವ ಮತ್ತೊಂದು ಸ್ವಯಂ ಸೇವಾಸಂಸ್ಥೆ ಸಂರಕ್ಷಾದೊಂದಿಗೂ ಸತೀಶ್ ಗುರ್ತಿಸಿಕೊಂಡಿದ್ದಾರೆ.
ಸೇವಾ ಫ್ರೀ ಕ್ಲಿನಿಕ್ನಲ್ಲಿನ ದಾಖಲೆಗಳ ಪ್ರಕಾರ- ಪ್ರತಿವಾರ ಕನಿಷ್ಠ 4 ಮಂದಿ ಏಡ್ಸ್ ಪೀಡಿತ ರೋಗಿಗಳು ಮಂಡ್ಯ ಜಿಲ್ಲೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸತೀಶ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಎಚ್ಐವಿ ವ್ಯಾಪಕವಾಗಿ ಹರಡಲು ಅಲ್ಲಿನ ಬ್ಲಡ್ಬ್ಯಾಂಕ್ಗಳೇ ಪ್ರಮುಖ ಕಾರಣ. ಎಚ್ಐವಿ ಪರೀಕ್ಷೆ ನಡೆಸದೆಯೇ ದಾನಿಗಳ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತಿರುವ ವಿಷಯವನ್ನು ರಕ್ತನಿಧಿಯ ತಂತ್ರಜ್ಞನೊಬ್ಬ ತಿಳಿಸಿದ್ದಾನೆ ಎಂದು ಸತೀಶ್ ಹೇಳಿದ್ದಾರೆ. ಪ್ರತಿ ರಕ್ತ ಸ್ಯಾಂಪಲ್ನ ಎಚ್ಐವಿ ಪರೀಕ್ಷೆ ನಡೆಸಲು 300 ರಿಂದ 500 ರುಪಾಯಿ ಖರ್ಚಾಗುತ್ತದೆ. ಆರ್ಥಿಕ ಹಿಂಜರಿಕೆಯಿಂದ ಈ ಪರೀಕ್ಷೆ ನಡೆಸಲು ರಕ್ತನಿಧಿಗಳು ಹಿಂದೇಟು ಹಾಕುತ್ತವೆ ಎನ್ನುತ್ತಾರೆ ಸತೀಶ್.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ರಕ್ತನಿಧಿಗಳು ತಾವು ಸಂಗ್ರಹಿಸಿದ ಪ್ರತಿ ರಕ್ತದ ಎಚ್ಐವಿ, ಹೆಪಟೈಟಿಸ್-ಬಿ ಇತ್ಯಾದಿ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ. ಆದರೆ, ಸುಪ್ರಿಂಕೋರ್ಟ್ನ ತೀರ್ಪನ್ನು ಗಾಳಿಗೆ ತೂರುವ ಬಹಳಷ್ಟು ಸಂಸ್ಥೆಗಳು ಹಣ ಸಂಗ್ರಹದತ್ತ ಲಕ್ಷ್ಯ ವಹಿಸುತ್ತವೆಯೇ ಹೊರತು, ಜನರ ಆರೋಗ್ಯವನ್ನು ಲೆಕ್ಕಿಸುವುದಿಲ್ಲ ಎನ್ನುವುದು ತಜ್ಞರ ದೂರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ