ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ-ಗವರ್ನೆನ್ಸ್ ಅಳವಡಿಕೆ
ಬೆಂಗಳೂರು: ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ- ಗವರ್ನೆನ್ಸ್ ವ್ಯವಸ್ಥೆ ಅಳವಡಿಕೆ ಕಾರ್ಯವನ್ನು ಟಾಟಾ ಕನ್ಸಲ್ಟೆನ್ಸಿಯ ಸಿಎಮ್ಸಿ ಲಿಮಿಟೆಡ್ ಪೂರ್ಣಗೊಳಿಸಿದೆ. ಇದರಿಂದಾಗಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ತವರಿನ ಆಡಳಿತ ವ್ಯವಹಾರಗಳು ಕಂಪ್ಯೂಟರೀಕೃತಗೊಂಡಿವೆ.
ಸರಕಾರದ ಇ- ಗವರ್ನೆನ್ಸ್ ಯೋಜನೆಯಡಿಯಲ್ಲಿ ಮದ್ದೂರಿನ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಿಎಮ್ಸಿಯ ಅಂತರರಾಷ್ಟ್ರೀಯ ಉಪಾಧ್ಯಕ್ಷ ಎಸ್. ಬಾಲಕೃಷ್ಣನ್ ಹೇಳಿದರು. ಅವರು ಭಾನುವಾರ ಬೆಂಗಳೂರು ಐಟಿ.ಕಾಮ್ನಲ್ಲಿ ಮಾತನಾಡುತ್ತಿದ್ದರು. ಸಿಎಮ್ಸಿಯ ಈ ಯೋಜನೆಯನ್ನು ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಔಪಚಾರಿಕವಾಗಿ ಉದ್ಘಾಟಿಸುವುದಕ್ಕೆ ರಾಜ್ಯ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ.
ಪ್ರಸ್ತುತ ಇರುವ ಮಾಹಿತಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು ಮತ್ತು ಆದಷ್ಟು ಬೇಗ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಆದಷ್ಟು ಬೇಗನೆ ತಲುಪುವಂತೆ ಮಾಡುವುದು ನಮ್ಮ ಉದ್ದೇಶ. ಅಲ್ಲದೆ, ಇದರಿಂದ ಮುಖ್ಯಮಂತ್ರಿಗಳು ಮತ್ತು ಸಚಿವಾಲಯದ ನಡುವೆ ಸಂಬಂಧ ಏರ್ಪಡುವುದೂ ಸಾಧ್ಯವಾಗುತ್ತದೆ. ಜೊತೆಗೆ ಸಾರ್ವಜನಿಕರ ಅಗತ್ಯಗಳನ್ನು ಪೂರೈಸುವುದು ಸುಲಭವಾಗುತ್ತದೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಮಹಾರಾಷ್ಟ್ರ, ಸಿಕ್ಕಿಂ ಮತ್ತು ಚತ್ತೀಸ್ಘಡ ರಾಜ್ಯಗಳೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ. ರಾಜ್ಯದಲ್ಲಿ ಮುಂದಿನ ವರ್ಷ ಐದು ಸರಕಾರಿ ಕಚೇರಿಗಳಿಗೆ ಪರಸ್ಪರ ಸಂಪರ್ಕ ಒದಗಿಸಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
(ಇನ್ಫೋ ವಾರ್ತೆ)












Click it and Unblock the Notifications