ಕಾವೇರಿವಿವಾದ : 25% ಇತ್ಯರ್ಥ, 75% ವರ್ಷದೊಳಗೆ ಇತ್ಯರ್ಥ
ನವದೆಹಲಿ : ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಶೀತಲಯುದ್ಧಕ್ಕೆ ಕಾರಣವಾಗಿರುವ ಕಾವೇರಿ ಜಲ ವಿವಾದ ಇನ್ನೊಂದು ವರ್ಷದಲ್ಲಿ ಬಗೆಹರಿಯಬಹುದೆನ್ನುವ ವಿಶ್ವಾಸವನ್ನು ಕೇಂದ್ರ ಜಲ ಸಂಪನ್ಮೂಲ ಖಾತೆ ರಾಜ್ಯ ಸಚಿವೆ ಬಿಜೊಯಾ ಚಕ್ರವರ್ತಿ ವ್ಯಕ್ತಪಡಿಸಿದ್ದಾರೆ.
ಒಂಭತ್ತನೇ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿವಾದದ ಶೇ.25 ರಷ್ಟು ಈಗಾಗಲೇ ಪರಿಹಾರವಾಗಿದ್ದು, ಉಳಿದ ಶೇ.75 ರಷ್ಟು ಭಾಗ ಇನ್ನೊಂದು ವರ್ಷದೊಳಗೆ ಇತ್ಯರ್ಥವಾಗಬಹುದು ಎಂದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಜಲಕ್ಷಾಮವನ್ನು ವ್ಯವಸ್ಥಿತವಾಗಿ ನಿಭಾಯಿಸಲು ಪ್ರತಿಯಾಂದು ನದಿಯ ಜಲಾನಯನ ಪ್ರದೇಶದಲ್ಲಿಯೂ ಸಮರ್ಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಯೋಜನೆ ಆಧಾರಿತ ನೀರಾವರಿ ಯೋಜನೆಗಳನ್ನು ರೂಪಿಸುವ ಬದಲು ಜನರ ಅಗತ್ಯಗಳನ್ನು ಪೂರೈಸುವ ಯೋಜನೆಗಳನ್ನು ರೂಪಿಸಲು ಅಗತ್ಯವಾದ ನೀತಿಯನ್ನು ಅನುಸರಿಸಬೇಕು ಎಂದು ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವೆ ಬಿಜೊಯಾ ಚಕ್ರವರ್ತಿ ಹೇಳಿದರು.
(ಇನ್ಫೋ ವಾರ್ತೆ)