ಬೆಂಗಳೂರಲ್ಲಿ ಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಕಾರ್ಯಾರಂಭ
ಬೆಂಗಳೂರು : ಹೊಸ ಅಲೆ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆ (ಐಬಿಎಬಿ)ಯನ್ನು ಸ್ಥಾಪಿಸಿರುವುದಾಗಿ ರಾಜ್ಯ ಐಟಿ ಸಚಿವ ಪ್ರೊ। ಬಿ.ಕೆ.ಚಂದ್ರಶೇಖರ್ ಪ್ರಕಟಿಸಿದ್ದಾರೆ.
ವಿಜ್ಞಾನಿ ಶರತ್ಚಂದ್ರ ಅವರ ಅಧ್ಯಕ್ಷತೆ ಹಾಗೂ ಪ್ರೊ। ಮಂಜು ಬನ್ಸಾಲ್ ನಿರ್ದೇಶಕತ್ವದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಬೆಂಗಳೂರುಐಟಿ.ಕಾಂ ಮೇಳದಲ್ಲಿ ಸಚಿವರು ಶನಿವಾರ ತಿಳಿಸಿದರು. ಐಸಿಐಸಿಐ ವೆಂಚರ್ ಕಂಪನಿ ಈ ಸಂಸ್ಥೆಯ ಸಹಯೋಗಿಯಾಗಿದ್ದು, ಸರ್ಕಾರ ಮತ್ತು ಐಸಿಐಸಿಐ ತಲಾ 5 ಕೋಟಿ ರುಪಾಯಿ ಬಂಡವಾಳ ಹೂಡಿವೆ ಎಂದರು.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರೊ। ಬನ್ಸಾಲ್, ವಿಜ್ಞಾನ ಮತ್ತು ತಂತ್ರಜ್ಞಾನ ಪದವಿ ಪಡೆದ ವಿದ್ಯಾರ್ಥಿಗಳಿಗೆ (ಬಿಎಸ್ಸಿ, ಎಂಎಸ್ಸಿ, ಬಿಇ, ಬಿಟೆಕ್, ಎಂಬಿಬಿಎಸ್) ಒಂದು ವರ್ಷ ಅವಧಿಯ ಸ್ನಾತಕೋತ್ತರ ಪದವಿಯನ್ನು ಮುಂದಿನ ವರ್ಷ ಫೆಬ್ರವರಿಯಿಂದ ಪ್ರಾರಂಭಿಸಲಾಗುವುದು. ಇದಕ್ಕೆ ಮೊದಲ ವರ್ಷ 50 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಪಠ್ಯಕ್ರಮವು ಜೀವವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾಗಿರುತ್ತದೆ. ಇತರ ಅಲ್ಪಾವಧಿ ಕೋರ್ಸುಗಳನ್ನು ಪ್ರಾರಂಭಿಸುವ ಯೋಜನೆಯೂ ಇದೆ ಎಂದು ಹೇಳಿದರು.
(ಇನ್ಫೋ ವಾರ್ತೆ)