ಗೋಪಾಲಕರಾದರಯ್ಯ ಬೆಂಗಳೂರು ಮಹಾನಗರದ ಪೊಲೀಸರು !
ಬೆಂಗಳೂರು : ನಗರ ಪೊಲೀಸರು ಪೂಜೆಯನ್ನೂ ಮಾಡಬಾರದು, ನಿದ್ದೆಯನ್ನೂ ಮಾಡಬಾರದು! ಎಂದು ನೂತನ ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ಅವರು ಹೊರಡಿಸಿರುವ ಅಪ್ಪಣೆಯಲ್ಲಿ ಎರಡನೇ ಭಾಗ ಹೆಚ್ಚೂ ಕಡಿಮೆ ಅನುಷ್ಠಾನಕ್ಕೆ ಬಂದಿದೆ.
ಹೆಂಡತಿ ಮಕ್ಕಳ ಶಾಪವನ್ನೂ ಲೆಕ್ಕಿಸದೆ ನಗರ ಪೊಲೀಸರು ಕಳೆದೆರಡು ರಾತ್ರಿಗಳಲ್ಲಿ ಬೀದಿಗಿಳಿದಿದ್ದಾರೆ. ಈಗಿನ ಕಳ್ಳಕಾಕರು ಕಳವಿಗಾಗಿ ರಾತ್ರಿ ವೇಳೆಯನ್ನೇ ಅವಲಂಬಿಸಿಲ್ಲವಾದ್ದರಿಂದ ಪೊಲೀಸರೇನೂ ಕಳ್ಳಕಾಕರ ಬೆನ್ನು ಬಿದ್ದಿಲ್ಲ . ಬದಲಿಗೆ ಮೂಗುದಾರವಿಲ್ಲದೆ ಅಲೆಯುತ್ತಿರುವ ಬಿಡಾಡಿ ಜಾನುವಾರಗಳನ್ನು ಬೆನ್ನಟ್ಟಿ ಹಿಡಿಯುತ್ತಿದ್ದಾರೆ. ಹಿಡಿಯಲೇಬೇಕು, ಸಾಂಗ್ಲಿಯಾನ ದಂಡ ಹಿಡಿದಿದ್ದಾರೆ.
ಕೊರಳಪಟ್ಟಿ ಇಲ್ಲದೆ ಅಡ್ಡಾಡುವ ನಾಯಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಹಿಡಿದು ವ್ಯಾನಲ್ಲಿ ತುಂಬಿಕೊಂಡು ಹೋಗುವುದನ್ನು ನೋಡಿದ್ದೀರಲ್ಲಾ , ಅದೇ ರೀತಿ ಪೊಲೀಸರು ಬಿಡಾಡಿ ಜಾನುವಾರುಗಳ ಹಿಡಿಯುತ್ತಿದ್ದಾರೆ. ಬುಧವಾರ ಮಧ್ಯರಾತ್ರಿಯಿಂದೀಚೆಗೆ 300 ಕ್ಕೂ ಹೆಚ್ಚು ದನಗಳು ಪೊಲೀಸರಿಗೆ ಸಿಕ್ಕಿವೆ. ಬಂಧನಕ್ಕೊಳಗಾದ ದನಗಳು ಕಾಟನ್ಪೇಟೆಯ ಸೂಪರ್ ಚಿತ್ರಮಂದಿರದ ಆವರಣ, ಕೋರಮಂಗಲದ ಗೋಶಾಲೆ ಮತ್ತಿತರ ಆವರಣಗಳಲ್ಲಿ ಹುಲ್ಲು ಮೇಯುತ್ತಿವೆ.
ಹಾಲು ಕರೆದುಕೊಂಡು ಬೀದಿಗೆ ದೂಡಿದ ಜಾನುವಾರುಗಳು ಬೆಳಗ್ಗೆಯಾದರೂ ಮನೆಗೆ ಬರದಾಗ, ಆಯಾಯ ಹಸುಗಳ ಮಾಲೀಕರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ , ದಂಡ ಕಟ್ಟಿ ಹಸುಗಳನ್ನು ವಾಪಸ್ಸು ಕರೆತರುತ್ತಿದ್ದಾರೆ.
ಗುಸುಗುಸು : ಇರುವ ಕೆಲಸ ಮಾಡಲೇ ಟೈಂ ಅನ್ನೋದು ಇಲ್ಲದಿರುವಾಗ ಜಾನುವಾರಗಳ ಹಿಡಿಯಲಿಕ್ಕೆ ಹೆಚ್ಚುವರಿ ಸಮಯ ಎಲ್ಲಿಂದ ತರುವುದಪ್ಪಾ ಎಂದು ಪೊಲೀಸರು ಪಿಸುಗುಟ್ಟುತ್ತಿದ್ದಾರೆ. ಏನೂ ಕೇಳಿಸದವರಂತೆ ಸಾಂಗ್ಲಿಯಾನ ಕಟ್ಟುನಿಟ್ಟಿನ ಹೊಸ ಆದೇಶಗಳನ್ನು ಹೊರಡಿಸುತ್ತಲೇ ಇದ್ದಾರೆ.
ಬೆಂಗಳೂರಿನ ವಿಶೇಷ ಇನ್ನೇನಪ್ಪಾ ಅಂದರೆ...
- ಬಸ್ಸು ಮುಂತಾದ ಭಾರೀ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ನಗರದ ನೃಪತುಂಗ ಹಾಗೂ ಕಸ್ತುರಬಾ ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ಶೀಘ್ರದಲ್ಲಿ ಅನುಮತಿ.
- ಎಂ.ಜಿ.ರಸ್ತೆ ಹಾಗೂ ಮೇಲು ಸೇತುವೆಗಳಲ್ಲಿ ಸೈಕಲ್ ಸಂಚಾರಕ್ಕೆ ನಿಷೇಧ. ಈ ಆದೇಶ ಶೀಘ್ರದಲ್ಲೇ ಜಾರಿ.
- ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ವಾರಕ್ಕೆರಡು ದಿನ ವಾಹನ ಸಂಚಾರ ಹಾಗೂ ವಾಹನಗಳ ಪಾರ್ಕಿಂಗ್ ರದ್ದು ಪಡಿಸಲು ಚಿಂತನೆ. ಈ ಪ್ರದೇಶದಲ್ಲಿ ಗ್ರಾಹಕರು ಆರಾಮಾಗಿ ಷಾಪಿಂಗ್ ಮಾಡಲೆಂದು ಈ ಕ್ರಮ.
- ಮಹಾತ್ಮಗಾಂಧಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಏಕಮುಖ ಸಂಚಾರ ಜಾರಿಗೊಳಿಸಲು ಕ್ರಮ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...