ಬ್ಯಾರಿಅಕಾಡೆಮಿ ಸ್ಥಾಪನೆಗೆ ಮುಖ್ಯಮಂತ್ರಿಗಳನ್ನು ಕೇಳಬೇಕಲ್ಲವಾ?
ಉಡುಪಿ: ‘ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಯ ಬೇಡಿಕೆಯನ್ನು ನೀವು ನನ್ನ ಮುಂದೆ ಇಟ್ಟಿದ್ದೀರಿ. ಆದರೆ ನನ್ನ ಬಳಿ ಸಂಸ್ಕೃತಿ ಖಾತೆ ಕೂಡ ಇದೆ. ಹಿರಿಯನ್ನು ಕೇಳಿ ಮುಂದುವರೆಯಬೇಕು ಎಂಬುದು ನಮ್ಮ ಸಂಸ್ಕೃತಿ. ಆದ್ದರಿಂದ ಅಕಾಡೆಮಿ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಯವರ ಬಳಿ ಒಂದು ಮಾತು ಕೇಳಬೇಕಾಗುತ್ತದೆ’ ಎಂಬ ವಿಧೇಯ ಜಾಣ ಮಾತುಗಳನ್ನು ಆಡಿದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್.
ಅವರು ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದಲ್ಲಿ ಭಾನುವಾರ ನಡೆದ ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಭಾಂಗಣದಲ್ಲಿದ್ದ ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳ ಪ್ರಮುಖ ಬೇಡಿಕೆ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆ. ‘ಸಂಸ್ಕೃತಿ ಎಂಬ ಪದದಲ್ಲಿ ಬ್ಯಾರಿ ಸಂಸ್ಕೃತಿಗೂ ಆಶ್ರಯವಿದೆ. ನಿಮ್ಮ ಆಸೆಗೆ ತಣ್ಣೀರೆರಚಲಾರೆ. ಅಕಾಡೆಮಿ ಸ್ಥಾಪನೆಗೆ ನನ್ನ ಸಂಪೂರ್ಣ ಸಹಕಾರ, ಬೆಂಬಲಗಳನ್ನು ನೀಡುತ್ತೇನೆ’ ಎಂದು ಘೋಷಿಸಿದ ಸಚಿವೆ ತಮ್ಮ ಮಾತು ಮುಗಿಸಿದರು.
ಸಮಾರಂಭದ ವಿಶೇಷ ಅತಿಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ , ತುಳು ಕೊಡವ ಭಾಷೆ ಮಾತ್ರವಲ್ಲದೆ, ಬ್ಯಾರಿ ಭಾಷೆಯನ್ನೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಪತ್ರಕರ್ತ ಬಿ.ಎಂ. ಹನೀಫ್ ಅಕಾಡೆಮಿ ಸ್ಥಾಪನೆಯ ಜೊತೆಗೆ ಇತರ ಹತ್ತು ಬೇಡಿಕೆಗಳಿರುವ ನಿರ್ಣಯ ಮಂಡಿಸಿದರು. ಉಡುಪಿ ಶಾಸಕ ಯು.ಆರ್ ಸಭಾಪತಿ, ಕಾಪು ಶಾಸಕ ವಸಂತ ಸಾಲ್ಯಾನ್, ಲೋಕಸಭಾ ಸದಸ್ಯ ವಿನಯ ಕುಮಾರ್ ಸೊರಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ಪ್ರೋತ್ಸಾಹಿಸಿದರು.
ಎಲ್ಲಿದ್ದರಪ್ಪಾ ಈ ಬ್ಯಾರಿ ಸಾಹಿತಿಗಳು ?
ಇದು ಸಮ್ಮೇಳನಾಧ್ಯಾಕ್ಷರ ಅಚ್ಚರಿಯ ಮಾತು. ಕನ್ನಡದಲ್ಲಿ ಬರೆಯುವ ಅನೇಕ ಬ್ಯಾರಿಗಳು ಈಗ ಬ್ಯಾರಿ ಸಾಹಿತ್ಯದತ್ತ ಒಲವು ತೋರಿಸುತ್ತಿದ್ದಾರೆ. ಬ್ಯಾರಿ ಸಾಹಿತ್ಯದ ಮೊದಲ ಕಾದಂಬರಿ ‘ಒರ್ ಪೆಣ್ಣ್ರೆ ಕಿನಾವು’ (ಒರ್ವ ಹೆಂಗಸಿನ ಮಗು) ಬ್ಯಾರಿ ಸಾಹಿತ್ಯ ಕ್ಷೇತ್ರದ ಪ್ರಮುಖ ಹೆಜ್ಜೆ.
(ಇನ್ಫೋ ವಾರ್ತೆ)