ಗಡಿ ದಾಟದೆಯೇ ಭಯೋತ್ಪಾದನೆ ವಿರುದ್ಧ ಹೋರಾಟ: ಆಡ್ವಾಣಿ
ನವದೆಹಲಿ : ಅಂತಾರಾಷ್ಟ್ರೀಯ ಕಾನೂನು ಅನುಮತಿ ನೀಡಿದರೂ ಕೂಡ ಭಾರತವು, ಗಡಿಯನ್ನು ದಾಟದೆಯೇ ಭಯೋತ್ಪಾಕರನ್ನು ಹುಟ್ಟಡಗಿಸುವ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ ಮಂಗಳವಾರ ಹೇಳಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನ ಕುಟುಂಬಕ್ಕೆ ಮಂಜೂರು ಮಾಡಲಾಗಿರುವ ಪೆಟ್ರೋಲ್ ಪಂಪ್ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಾವು ಗಡಿ ದಾಟಿ ಹೋಗಿ ಹೋರಾಟ ಮಾಡಲು ಬಯಸುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲೂ ಕೂಡ ನಾವು ನಮ್ಮ ದೇಶದೊಳಗಿನಿಂದಲೇ ಹೋರಾಡಿ ಜಯಸಾಧಿಸಿದೆವು ಎಂದು ತಿಳಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಏಕೆ ದಾಳಿ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಭಯೋತ್ಮಾದಕರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಸರಕಾರಕ್ಕೆ ಗೊತ್ತಿದೆ. ಗಡಿ ನಿಯಂತ್ರಣ ರೇಖೆ ದಾಟದೆಯೇ, ನಾವು ನಮ್ಮ ಗಡಿಯಲ್ಲಿದ್ದುಕೊಂಡೇ ಅವರ ಹುಟ್ಟಡಗಿಸುತ್ತೇವೆ ಎಂದು ಆಡ್ವಾಣಿ ಹೇಳಿದರು.
ಪೋಖ್ರಾನ್ನಲ್ಲಿ ನಡೆಸಿದ ಅಣ್ವಸ್ತ್ರ ಪ್ರಯೋಗ ಹಾಗೂ ಕಾರ್ಗಿಲ್ ವಿಜಯ ಭಾರತದ ಭದ್ರತೆಯನ್ನು ಹೆಚ್ಚಿಸಿದೆ. ರಕ್ಷಣೆ ಯಾವುದೇ ದೇಶದ ಅತಿ ಮುಖ್ಯ ವಿಷಯ. ಆದರೆ, ರಕ್ಷಣೆ ಕಾಲಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ ಬಲಗೊಳ್ಳುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ ಎಂದು ಅವರು ಹೇಳಿದರು.
ಅಮೆರಿಕ ಎಚ್ಚರಿಕೆ: ಈ ಮಧ್ಯೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕೆಂದು ಭಾರತ ಹಾಗೂ ಪಾಕಿಸ್ತಾನಗಳೆರಡಕ್ಕೂ ಅಮೆರಿಕಾ ಎಚ್ಚರಿಕೆ ನೀಡಿದೆ. ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೊವೆಲ್ ಈ ಎಚ್ಚರಿಕೆ ನೀಡಿದ್ದಾರೆ.
ಭಾರತ - ಪಾಕ್ಗಳ ನಡುವೆ ಮಾತುಕತೆ ನಡೆಯಲು ಅಮೆರಿಕ ನೆರವು ನೀಡುತ್ತದೆ ಎಂದೂ ಅವರು ಹೇಳಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವಂತೆ ಎರಡೂ ರಾಷ್ಟ್ರಗಳಿಗೆ ಪೊವೆಲ್ ತಿಳಿಸಿದ್ದಾರೆ.
(ಪಿ.ಟಿ.ಐ)