ವಿಶ್ವವೇ ಹತ್ತಿ ಉರಿಯುತ್ತಿರುವಾಗ ಉರ್ದು ವಾರ್ತೆಗೇಕೆ ಒತ್ತಾಯ?
ಬೆಂಗಳೂರು : ‘ಗುಜರಾತ್ನಲ್ಲಿ ಸಂಭವಿಸಿದ ಭೂಕಂಪ , ಅಲ್ಲಿ ಕ್ರೆೃಸ್ತರ ಮೇಲೆ ನಡೆದ ಅತೀವ ದೌರ್ಜನ್ಯದ ಫಲ’ ಎಂಬ ಅಮಾನವೀಯ ಹೇಳಿಕೆ ನೀಡಿ, ಟಿ.ಜಾನ್ ತಮ್ಮ ಸಚಿವ ಸ್ಥಾನವನ್ನೇ ಕಳೆದುಕೊಂಡರೂ ಕರ್ನಾಟಕದ ಸಚಿವರ ಬಾಯಿಚಪಲ ಬಿಟ್ಟಿಲ್ಲ.
ಈಗ ರಾಜ್ಯ ವಸತಿ ಸಚಿವ ಖಮರುಲ್ಲಾ ಇಸ್ಲಾಂ ಬೆಂಗಳೂರು ದೂರದರ್ಶನದಲ್ಲಿ ಉರ್ದು ವಾರ್ತೆ ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಗುರುವಾರ ಬೆಂಗಳೂರಿನ ಅಲ್ ಅಮೀನ್ ಕಾಲೇಜಿನಲ್ಲಿ ನಡೆದ ಉರ್ದು ಪತ್ರಿಕೋದ್ಯಮದ ಸಮಸ್ಯೆಗಳು ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸಚಿವರು, ಬೆಂಗಳೂರು ದೂರದರ್ಶನ ಕೇಂದ್ರ ಉರ್ದು ವಾರ್ತೆ ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದರು.
ಜಮ್ಮು-ಕಾಶ್ಮೀರದ ಶ್ರೀನಗರ, ಹೈದರಾಬಾದ್ ದೂರದರ್ಶನ ಕೇಂದ್ರಗಳು ಈಗಾಗಲೇ ಉರ್ದು ವಾರ್ತೆ ಪ್ರಸಾರ ಮಾಡುತ್ತಿವೆ. ಅದೇ ರೀತಿ ರಾಜ್ಯದಲ್ಲಿ ಕೂಡ ಬೆಂಗಳೂರು ದೂರದರ್ಶನ ಉರ್ದು ವಾರ್ತೆ ಪ್ರಸಾರ ಮಾಡಲೇ ಬೇಕು ಎಂದು ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿದರು.
ವಿರೋಧ : ಖಮರುಲ್ಲಾ ಇಸ್ಲಾಂ ಅವರ ಈ ಹೇಳಿಕೆ ಕನ್ನಡ ಸಂಘಟನೆಗಳನ್ನು ಕೆರಳಿಸಿದೆ. ಹಿಂದೆ 1994ರಲ್ಲಿ ಉರ್ದು ವಾರ್ತೆ ಪ್ರಸಾರವಾದಾಗ ರಾಜ್ಯ ಹತ್ತಿ ಉರಿದದ್ದನ್ನು ಮರೆತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವರ ವಿರುದ್ಧ ರಾಜ್ಯದ ಹಲವು ಕನ್ನಡ ಪರ ಸಂಘಟನೆಗಳು ಕಿಡಿ ಕಾರಿವೆ.
ವಿಶ್ವವೇ ಹತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಇಂಥ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ, ರಾಜ್ಯದ ಕೋಮು ಸೌಹಾರ್ಧಕ್ಕೆ ಸಚಿವರು ಹುಳಿ ಹಿಂಡುತ್ತಿದ್ದಾರೆ ಎಂದು ಕನ್ನಡ ಶಕ್ತಿ ಕೇಂದ್ರದ ಡಾ. ಚಿದಾನಂದ ಮೂರ್ತಿ ಆರೋಪಿಸಿದ್ದಾರೆ. ಈ ಹೇಳಿಕೆಯಿಂದ ರಾಜ್ಯದ ಪರಿಸ್ಥಿತಿ ಹದಗೆಟ್ಟು, ಅನಾಹುತ ಸಂಭವಿಸಿದರೆ, ಅದಕ್ಕೆ ಸಚಿವರೇ ಹೊಣೆಯಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ಸಚಿವರ ಹೇಳಿಕೆ ಖಂಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲರು, ಇಂತಹ ವಿವೇಚನೆ ರಹಿತ ಹೇಳಿಕೆ ನೀಡದಂತೆ ಸಚಿವರಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. ಶ್ರೀನಗರ ಗೆಳೆಯರ ಬಳಗ, ಕಸ್ತೂರಿ ಕನ್ನಡಿಗರ ಕೂಟ ಮೊದಲಾದ ಕನ್ನಡ ಪರ ಸಂಘಟನೆಗಳು ಖಮರುಲ್ಲಾ ಇಸ್ಲಾಮ್ ಅವರ ಹೇಳಿಕೆಯನ್ನು ಖಂಡಿಸಿವೆ.
ಎಚ್ಚರಿಕೆ : ಸಚಿವರ ಒತ್ತಡಕ್ಕೆ ಕಟ್ಟುಬಿದ್ದು, ಸರಕಾರ ಉರ್ದು ವಾರ್ತೆ ಪ್ರಸಾರಕ್ಕೆ ಪ್ರಯತ್ನಿಸಿದರೆ, ಉಗ್ರ ಹೋರಾಟ ಮಾಡುವುದಾಗಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಕನ್ನಡ ದಿನ ಪತ್ರಿಕೆಯಾಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...