ಭಕ್ತರ ಉದ್ಘೋಷದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಮೈಸೂರು : ಕನ್ನಡನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಬುಧವಾರ ಸಂಜೆ ಮಂಜು ಮುಸುಕಿತ್ತು. ಕೊರೆಯುವ ಚಳಿ ಇತ್ತು. ನಡುಗುವ ಚಳಿಯಲ್ಲೇ ಪವಿತ್ರ ತೀರ್ಥಸ್ನಾನಕ್ಕಾಗಿ ಕಾವೇರಿಯ ಭಕ್ತರು ಕಾತುರದಿಂದ ಕಾಯುತ್ತಿದ್ದರು.
ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಪತಿ ಆಚಾರ್ಯರು ಬ್ರಹ್ಮ ಕುಂಡಿಕೆಯ ಬಳಿ ತುಲಾಸಂಕ್ರಮಣ ಪೂಜೆ ಮುಗಿಸಿ ಮಂಗಳಾರತಿ ಎತ್ತುವ ವೇಳೆಗೆ ಮೇಷ ಲಗ್ನದಲ್ಲಿ (6-58ಕ್ಕೆ) ಪವಿತ್ರ ತೀರ್ಥೋದ್ಭವ ಆಯಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಉದ್ಘೋಷ ಮುಗಿಲು ಮುಟ್ಟಿತು.
ಜಲರೂಪಿಯಾಗಿ ಬ್ರಹ್ಮ ಕುಂಡಿಕೆಯಿಂದ ಅವಿರ್ಭವಿಸುವ ತಾಯಿ ಕಾವೇರಿಯನ್ನು ಕಾಣಲು, ಕರ್ನಾಟಕದ ವಿವಿಧ ಭಾಗಗಳಿಂದಷ್ಟೇ ಅಲ್ಲದೆ, ಕೇರಳ, ತಮಿಳುನಾಡು ಹಾಗೂ ವಿದೇಶಗಳಿಂದಲೂ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಂ. ನಾಣಯ್ಯ, ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್, ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದ ಸುವರ್ಣ ಪ್ರಣವ ಸ್ವಾಮೀಜಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕೊಡಗು ಏಕೀಕರಣ ರಂಗ, ಹಿಂದೂ ಜಾಗರಣ ವೇದಿಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿತ್ತು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...