ನವೆಂಬರ್ ಅಂತ್ಯಕ್ಕೆ ಸಮಗ್ರ ವಚನ ಸಂಪುಟಗಳ ಬಿಡುಗಡೆ
ಬೆಂಗಳೂರು : ನವೆಂಬರ್ ಅಂತ್ಯದೊಳಗೆ ಸಮಗ್ರ ವಚನ ಸಂಪುಟಗಳನ್ನು ಬಿಡುಗಡೆ ಮಾಡಲು ಕನ್ನಡ ಪುಸ್ತಕ ಪ್ರಾಧಿಕಾರ ನಿರ್ಧರಿಸಿದೆ. ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಪರಿಷ್ಕೃತ ವಚನ ಸಂಪುಟ ಪ್ರಕಟಿಸುವ ನಿರ್ಧಾರವನ್ನು ಪ್ರಾಧಿಕಾರ ತಳೆದಿದೆ.
ಈ ವಿಷಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದ್ದಾರೆ. ವಚನ ಸಂಪುಟಗಳ ಮುದ್ರಣಕ್ಕಾಗಿ 20 ಲಕ್ಷ ರುಪಾಯಿಗಳ ವಿಶೇಷ ಅನುದಾನವನ್ನು ಕನ್ನಡ ಮತ್ತು ಇಲಾಖೆ ಬಿಡುಗಡೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.
ಸಮಗ್ರ ವಚನ ಸಂಪುಟ ಮುದ್ರಣದಲ್ಲಿ ಉತ್ತಮ ಕಾಗದ ಬಳಸಲಾಗುತ್ತಿದೆ. ಸುಂದರ ಮುಖಪುಟ, ಉತ್ಕೃಷ್ಟ ರಕ್ಷಾಕವಚ (ಬೈಂಡಿಂಗ್) ಒಳಗೊಂಡ ಸಂಪುಟದ ಬೆಲೆ 850 ರುಪಾಯಿಗಳಾಗಲಿವೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಸಮಗ್ರ ವಚನ ಸಂಪುಟ ಪಡೆಯಲಿಚ್ಛಿಸುವವರು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿಗೆ 850 ರುಪಾಯಿಗಳ ಡಿ.ಡಿ. ಕಳುಹಿಸಿ ಪುಸ್ತಕ ಕಾಯ್ದಿರಿಸಬಹುದು. ಪುಸ್ತಕ ಬಿಡುಗಡೆಯಾಗುತ್ತಿದ್ದಂತೆಯೇ ಪ್ರಾಧಿಕಾರ ತನ್ನ ವೆಚ್ಚದಲ್ಲೇ ಪುಸ್ತಕಗಳನ್ನು ಅವರಿಗೆ ತಲುಪಿಸುತ್ತದೆ ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080 - -6603812ನ್ನು ಸಂಪರ್ಕಿಸಬಹುದು.