ಟ್ರಾಲಿಯಿಂದ ನೆಲಕ್ಕುರುಳಿದ್ದ ಹನುಮ ಶಿಲೆಯ ಮರು ಪಯಣ
ಹಾಸನ: ಶಿಲ್ಪಿಯ ಉಳಿಯ ಪೆಟ್ಟು ತಿಂದು ಮೂರ್ತ ರೂಪ ಪಡೆಯುವ ಮೊದಲೇ, ಸಹಸ್ರಾರು ಜನರಿಂದ ಪೂಜೆ ಸ್ವೀಕರಿಸುತ್ತಿರುವ ಬೃಹತ್ ಹನುಮ ಶಿಲೆ ಹೊತ್ತ ಹೈಡ್ರಾಲಿಕ್ ಟ್ರಾಲಿ ಕೊನೆಗೂ ತಮಿಳುನಾಡಿನತ್ತ ತನ್ನ ಪ್ರಯಾಣ ಮುಂದುವರಿಸಿದೆ.
ನೆಲಕ್ಕೆ ಉರುಳಿದ್ದ 36 ಅಡಿ ಉದ್ದ, 9.50 ಅಡಿ ಎತ್ತರ ಹಾಗೂ 17.50 ಅಡಿ ಅಗಲದ ಈ ವಿರಾಟ ಶಿಲೆಯನ್ನು ಮತ್ತೆ ಟ್ರಾಲಿಯ ಮೇಲೆ ಇಡಲಾಗಿದ್ದು, ಪ್ರಯಾಣ ಆರಂಭವಾಗಿದೆ.
ತಿರುವಳ್ಳೂರಿನ ಪೆರಿಕುಪ್ಪಮ್ ದೇವಾಲಯದಲ್ಲಿ ವಿಶ್ವರೂಪಿ ಪಂಚಮುಖಿ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ದೇವಸ್ಥಾನ ಟ್ರಸ್ಟ್ , ಹಾಸನ ಬಳಿಯ ಮರ್ಕುಲಿ ಗ್ರಾಮದ ಕ್ವಾರಿಯಿಂದ ಈ ಬೃಹತ್ ಗಾತ್ರದ ಏಕ ಶಿಲೆಯನ್ನು ತರಿಸಿಕೊಳ್ಳುತ್ತಿದೆ.
ಶಿಲೆಯನ್ನು ತಮಿಳುನಾಡಿಗೆ ತರಲು ಟ್ರಸ್ಟ್ ಎನ್. ಪರೇಕ್ ಇಂಡಿಯಾ ಲಿಮಿಟೆಡ್ ಟ್ರಾನ್ಸ್ಪೋರ್ಟ್ ಕಂಪನಿಗೆ 37 ಲಕ್ಷ ರುಪಾಯಿಗಳನ್ನು ನೀಡಲು ಒಪ್ಪಿದೆ. ಈ ಸಾಹಸಕ್ಕೆ ಕೈಹಾಕಿರುವ ಕಂಪನಿ, ತನ್ನ ಹೈಡ್ರಾಲಿಕ್ ಟ್ರಾಲಿಯಲ್ಲಿ ಕಲ್ಲು ಸಾಗಿಸುತ್ತಿದ್ದಾಗ ಮೇ ತಿಂಗಳ 7ರಂದು ಹನುಮ ಶಿಲೆ ಕೆಳಕ್ಕುರುಳಿತ್ತು.
ಕಿರಿದಾದ ರಸ್ತೆಯಲ್ಲಿ ಸಾಗಲಾಗದೆ, ಗುತ್ತಿಗೆದಾರರ ನಡುವಿನ ವಿವಾದ ಹಾಗೂ ಇನ್ನಿತರ ತಾಂತ್ರಿಕ ತೊಡಕುಗಳಿಂದ ತಿಂಗಳುಗಟ್ಟಲೆ ಹಲಸಿನಹಳ್ಳಿ ಕ್ರಾಸ್ಬಳಿಯಿಂದ ನಿಂತಿದ್ದ 96 ಚಕ್ರಗಳ ಹೈಡ್ರಾಲಿಕ್ ಟ್ರಾಲಿ, ವಿಘ್ನಗಳನ್ನು ನಿವಾರಿಸಿಕೊಂಡು ಚನ್ನರಾಯಪಟ್ಟಣದತ್ತ ಹೊರಡಲು, ಹಿಂದಕ್ಕೆ ಚಲಿಸುತ್ತಿದ್ದಾಗ, ಮೇ 7ರಂದು ಚಕ್ರಗಳು ಒಂದು ಪಾರ್ಶ್ವಕ್ಕೆ ವಾಲಿದ ಕಾರಣ ಟ್ರಾಲಿಯ ಮೇಲಿದ್ದ ಮರದ ದಿಮ್ಮಿಗಳು ಮುರಿದು ಹನುಮ ಶಿಲೆ ನೆಲಕ್ಕುರುಳಿತ್ತು .
ಟ್ರಾಲಿಯನ್ನು ದುರಸ್ತಿ ಮಾಡಿ, ಈ ಶಿಲೆಯನ್ನು ಮತ್ತೆ ಟ್ರಾಲಿಯ ಮೇಲೆ ಇಡಲು, ಕನಿಷ್ಠ 2 ತಿಂಗಳುಗಳಾದರೂ ಬೇಕು ಎಂದು ಅಂದಾಜು ಮಾಡಲಾಗಿತ್ತು, ಆದರೆ, ಈ ಕಾರ್ಯಕ್ಕೆ 6 ತಿಂಗಳೇ ಹಿಡಿಯಿತು. ಈ ಮಧ್ಯೆ ಭೂವಿಜ್ಞಾನ ಇಲಾಖೆ, ಸಾರಿಗೆ ಸಚಿವಾಲಯ, ಗೃಹ ಸಚಿವಾಲಯದ ಅನುಮತಿಗಳ ಸಮಸ್ಯೆಯೂ ಆಂಜನೇಯ ಶಿಲೆಯನ್ನು ಕಾಡಿತ್ತು.
ಪೂಜೆ : ಮುಂದೆಂದೋ ಆಂಜನೇಯನಾಗುವ ಈ ಹಾಸನದ ಹಸಿರು ಶಿಲೆಗೆ, ದೊಡ್ಡ ಗಾತ್ರದ ಮೂರು ನಾಮಗಳನ್ನು ಬರೆದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸುತ್ತಿದ್ದರು. ದಿನವೂ 30 ಕಿ.ಮೀಟರ್ ಮಾತ್ರ ಚಲಿಸುವ ಈ ಟ್ರಾಲಿ ಹೋದ ಊರುಗಳಲ್ಲೆಲ್ಲಾ ಪುರಜನರು, ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...