ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಮಾನ ಅಪಹರಣ ನಾಟಕದ ಪ್ರಮುಖ ಘಟನಾವಳಿಗಳು
ನವದೆಹಲಿ : 46 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಯಿದ್ದ ಏರ್ ಬೋಯಿಂಗ್ 737 ಬುಧವಾರ ರಾತ್ರಿ ಅಪರಣವಾಗಿತ್ತು ಎಂಬ ಸುದ್ದಿ ನಿಮ್ಮ ಕಿವಿಗೂ ಬಿದ್ದಿದೆ. ದೇಶದ ಜನರಲ್ಲಿ ಆಂತಕ ಮೂಡಿಸಿದ್ದ ಈ ವಿಮಾನ ಅಪಹರಣ ಒಂದು ‘ಹುಸಿ ಅಪರಹಣ- ಅಪಹರಣ ನಾಟಕ’ ಎಂದು ಸಾಬೀತಾಗಿದೆ.
ಆದರೆ, ಬುಧವಾರ ರಾತ್ರಿ 11-15ರಿಂದ ನಡೆದದ್ದಾದರೂ ಏನು...
- ಅ.3 ರಾತ್ರಿ 11-15 : ಸಿಡಿ 7444 ಅಲೆಯನ್ಸ್ ಬೋಯಿಂಗ್ ವಿಮಾನ ಮುಂಬಯಿಯಿಂದ ದೆಹಲಿಯತ್ತ ಹಾರಿತು.
- 11-30: ಅಹಮದಾಬಾದ್ ವಿಮಾನ ಸಂಚಾರ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂತು. ಸಿಡಿ 7444 ವಿಮಾನ ಅಪಹರಣ ಮಾಡಲಾಗಿದೆ ಎಂದು ತಿಳಿಸಿತು. ಪೈಲಟ್ ಅಶ್ವಿನ್ ಬಹಾಲ್ ಕಾಕ್ಪಿಟ್ ಲಾಕ್ ಮಾಡಿರುವ ಕಾರಣ, ಅಪಹರಣಕಾರರು ಪ್ರಯಾಣಿಕರ ಸ್ಥಳದಲ್ಲಿದ್ದಾರೆ ಎಂದೂ ತಿಳಿಸಿತು.
- ತತ್ಕ್ಷಣವೇ ದೆಹಲಿ, ಲಖನೌ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಯಿತು. ತುರ್ತು ಸೇವೆಗಳು ಸಜ್ಜುಗೊಂಡವು.
- ಅ.4 ಬೆಳಗಿನ ಝಾವ 12-52 (ಮಧ್ಯರಾತ್ರಿ) : ಅಹರಣವಾಗಿದೆ ಎನ್ನಲಾದ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ರನ್ವೇಯ ಲೈಟ್ಗಳನ್ನು ಆರಿಸಲಾಯಿತು.
- 12-57: ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳು ವಿಮಾನ ಸುತ್ತುವರಿದರು.
- 1-15: ವಿಮಾನ ಅಪಹರಣವಾಗಿದೆ ಎಂಬ ಸುದ್ದಿ ಮಾಧ್ಯಮಗಳಿಗೆ ತಿಳಿಯಿತು.
- 1-21: ನಾಗರಿಕ ವಿಮಾನ ಯಾನ ಸಚಿವ ಶಹನವಾಜ್ ಹುಸೇನ್ ವಿಮಾನ ಅಪಹರಣ ಸುದ್ದಿ ನಿಜ ಎಂದು ಹೇಳಿಕೆ ನೀಡಿದರು.
- 1-- 45: ಟಿ.ವಿ. ಚಾನೆಲ್ಗಳು ವಿಮಾನ ಅಪಹರಣದ ನೇರಪ್ರಸಾರಕ್ಕೆ ಸಜ್ಜಾದವು.
- 1-50: ಬಿಕ್ಕಟ್ಟು ನಿವಾರಣಾ ಸಮಿತಿ ಸಭೆ ಸೇರಿತು. ಹಿರಿಯ ಅಧಿಕಾರಿಗಳೆಲ್ಲ ನಾಗರಿಕ ವಿಮಾನ ಯಾನ ಖಾತೆ ಸಚಿವಾಲಯವಿರುವ ರಾಜೀವ್ಗಾಂಧಿ ಭವನದಲ್ಲಿ ಜಮಾಯಿಸಿದರು.
- 2-15: ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಎ.ಎಚ್. ಜುಂಗ್ ಅವರು ವಿಮಾನದಲ್ಲಿ ಇಬ್ಬರು ಅಪಹರಣಕಾರರು ಇದ್ದಾರೆ. ಅವರು ಹರುಕು ಮುರುಕು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದಾರೆ. ಕಾಕ್ಪಿಟ್ ಮುಚ್ಚಿರುವ ಕಾರಣ ಅಪಹರಣಕಾರರು ಪ್ರಯಾಣಿಕರ ಸ್ಥಳದಲ್ಲಿದ್ದಾರೆ ಎಂದು ತಿಳಿಸಿದರು.
- 2-20: ಗೃಹ ಸಚಿವ ಎಲ್.ಕೆ. ಆಡ್ವಾಣಿ ರಾಜೀವಗಾಂಧೀ ಭವನಕ್ಕೆ ಧಾವಿಸಿದರು. ಬಿಕ್ಕಟ್ಟು ನಿವಾರಣಾ ಸಮಿತಿ ಸಭೆಯ ನೇತೃತ್ವ ವಹಿಸಿದರು. ವಿಮಾನಯಾನ ಸಚಿವ, ರಕ್ಷಣಾ ಇಲಾಖೆ ಕಾರ್ಯದರ್ಶಿಗಳು, ಬೇಹುಗಾರಿಕೆ ದಳದ ವರಿಷ್ಠರು ಮುಂದಿನ ಕ್ರಮಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಿದರು.
- 2-30: ವಿಮಾನ ಅಪಹರಣದ ಬಗ್ಗೆ ಗೊಂದಲ ಆರಂಭವಾಯಿತು. ಟಿ.ವಿ. ಚಾನೆಲ್ ವಿಮಾನದೊಳಗಿರುವ ಪ್ರಯಾಣಿಕರನ್ನು ಸಂಪರ್ಕಿಸಿತು. ಪರಿಸ್ಥಿತಿಯ ಬಗ್ಗೆ ವಿಚಾರಿಸಿತು. ಬಹುತೇಕ ಪ್ರಯಾಣಿಕರಿಗೆ ಅಪಹರಣದ ಅರಿವೇ ಇರಲಿಲ್ಲ. ತಾಂತ್ರಿಕ ತೊಂದರೆಯಿಂದ ವಿಮಾನ ಇಳಿಸಲಾಗಿದೆ ಎಂದು ತಮಗೆ ತಿಳಿಸಲಾಗಿದೆ ಎಂದರು ಪ್ರಯಾಣಿಕರು.
- 4-00 : ಬೆಳಗ್ಗೆ 4 ಗಂಟೆವರೆಗೂ ಇದೇ ಗೊಂದಲ ಮುಂದುವರಿಯಿತು. ಆಡ್ವಾಣಿ ಪೈಲೆಟ್ ಜೊತೆ ಮಾತನಾಡಿದರು.
- 4-05: ಎನ್.ಎಸ್.ಜಿ. ಕಮಾಂಡೋಗಳು ಕಾಕ್ಪಿಟ್ ಒಳಗೆ ನುಗ್ಗಿದರು. ಅಲ್ಲಿ ಯಾವ ಅಪಹರಣಕಾರನೂ ಇರಲಿಲ್ಲ.
- 4-10 : ವಿಮಾನಯಾನ ಸಚಿವ ಶಹನವಾಜ್ ಹುಸೇನ್ ಇದೊಂದು ಹುಸಿ ವಿಮಾನ ಅಪಹರಣ ಎಂದು ಅಧಿಕೃತವಾಗಿ ಪ್ರಕಟಿಸಿದರು.
- 4-12: ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದರು. ಇದೊಂದು ಕಂಡು ಕೇಳರಿಯದ ಅಪಹರಣ ನಾಟಕ ಎಂದು ಸಾಬೀತಾಯಿತು. ಒಟ್ಟಿನಲ್ಲಿ ವಿಮಾನ ಅಪಹರಣ ಸುಖಾಂತ್ಯವಾಯ್ತು.
ಮುಖಪುಟ / ಇವತ್ತು... ಈ ಹೊತ್ತು...
Story first published: Thursday, October 4, 2001, 5:30 [IST]