ವೀರಪ್ಪನ್ ಶಿಕಾರಿ: ಬಿಎಸ್ಎಫ್ ವಾಪಸ್ಸು ಕರೆಸಿಕೊಳ್ಳಲು ಕೇಂದ್ರದ ನಿರ್ಧಾರ
ಬೆಂಗಳೂರು: ವೀರಪ್ಪನ್ ಶಿಕಾರಿ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆಯ ಸೇವೆಯನ್ನು ಮುಂದುವರಿಸುವಂತೆ ಕೋರಿರುವ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಇದರಿಂದಾಗಿ ವೀರಪ್ಪನ್ ಶಿಕಾರಿ ಕಾರ್ಯಾಚರಣೆಯಲ್ಲಿ ಭಾರೀ ಹಿನ್ನಡೆ ಉಂಟಾದಂತಾಗಿದೆ.
ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಜಂಟಿಯಾಗಿ ನಡೆಸುತ್ತಿರುವ ವೀರಪ್ಪನ್ ಶಿಕಾರಿ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆಯ ಹಾಜರಿಯನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಫ್ಯಾಕ್ಸ್ ಕಳುಹಿಸಲಾಗಿತ್ತು . ಆದರೆ, ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಲು ಒಪ್ಪಿಗೆ ನೀಡಿಲ್ಲ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಇತರೆ ಅತಿ ಮುಖ್ಯವಾದ ಕಾರ್ಯಾಚರಣೆಯಲ್ಲಿ ಗಡಿಭದ್ರತಾ ಪಡೆ ತೊಡಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ಖರ್ಗೆ ಹೇಳಿದರು. ರಾಜ್ಕುಮಾರ್ ಅಪಹರಣದ ನಂತರ ವೀರಪ್ಪನ್ ಶಿಕಾರಿಯಲ್ಲಿ ಎಸ್ಟಿಎಫ್ ಸಿಬ್ಬಂದಿಯಾಂದಿಗೆ ಗಡಿ ಭದ್ರತಾ ಪಡೆ ಸೇರಿಕೊಂಡಿದುದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಗಡಿಭದ್ರತಾ ಪಡೆಯ ಸೇವೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆಯುವುದರೊಂದಿಗೆ, ಬಂದ ದಾರಿಗೆ ಸುಂಕವಿಲ್ಲದಂತೆ ಎರಡನೇ ಬಾರಿಯೂ ಗಡಿ ಭದ್ರತಾ ಪಡೆ ಬರಿಗೈಯಲ್ಲಿ ವಾಪಸ್ಸಾದಂತಾಗಿದೆ.
(ಪಿಟಿಐ)