ಆಹಾರದಲ್ಲೂ ಪುರುಷರಿಗೆ ಸಿಂಹ ಪಾಲು ಸಲ್ಲದು -ಮೃದುಲಾಸಿನ್ಹಾ
ಮೈಸೂರು : ಮಹಿಳೆಯರಿಗೆ ಪೌಷ್ಟಿಕಾಂಶಯುಕ್ತ ಆಹಾರದ ಆಗತ್ಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ಡಿಸೆಂಬರ್ 10ರಂದು ದೇಶಾದ್ಯಂತ ಮಹಿಳೆಯರಿಗಾಗಿ ಸಮುದಾಯ ಆಹಾರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷ ಮೃದುಲಾ ಸಿನ್ಹಾ ಈ ವಿಷಯವನ್ನು ತಿಳಿಸಿದ್ದು , ಅವರು ಬುಧವಾರ ಮಹಿಳಾ ಕಲ್ಯಾಣದ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು. ಡಿಸೆಂಬರ್10ನ್ನು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದ್ದು ಅಂದೇ ಆಹಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿರುವುದು ಕಾಕತಾಳೀಯ.
ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಆಹಾರ ನೀಡುವುದಕ್ಕೆ ಬದಲಾಗಿ ಪುರುಷರಿಗೆ ಹೆಚ್ಚು ಆಹಾರವನ್ನು ಒದಗಿಸಲಾಗುತ್ತದೆ. ಆಹಾರದಲ್ಲಿಯೂ ಲಿಂಗಭೇದ ಮಾಡುವುದರಿಂದ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾವುಂಟಾಗುತ್ತದೆ. ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಮೃದುಲಾ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಶ್ರೀನಿವಾಸ್ ಪ್ರಸಾದ್ ಮೂಲಭೂತಅಗತ್ಯಗಳಾದ ಶಿಕ್ಷಣ, ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚದೇ ಇದ್ದಲ್ಲಿ ಮಹಿಳಾ ಕಲ್ಯಾಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)