ಪಾಕಿಸ್ತಾನದ ಮೇಲೆ ಭಾರತ ಯುದ್ಧ ಸಾರಲಿ- ಫರೂಕ್ ಅಬ್ದುಲ್ಲಾ ಆಗ್ರಹ
ಶ್ರೀನಗರ : ಕಾಶ್ಮೀರ ಕೊಳ್ಳದಲ್ಲಿ ದಿನೇದಿನೆ ಹೆಚ್ಚುತ್ತಿರುವ ಭಯೋತ್ಪಾದಕರ ಹುಟ್ಟಡಗಿಸಲು ಪಾಕಿಸ್ತಾನದ ಮೇಲೆ ಬಹಿರಂಗ ಯುದ್ಧ ಸಾರಿ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ನಾಶ ಮಾಡಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಹನೆಗೂ ಒಂದು ಮಿತಿಯಿದೆ. ಇದೇ ಪರಿಸ್ಥಿತಿ ಎಷ್ಟು ದಿನ ಮುಂದುವರಿಯುವುದು? ನಾವು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಬೇಕು. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲು ಹಾಗೂ ಅಲ್ಲಿನ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ನಾಶ ಮಾಡುವ ಸಮಯ ಸನ್ನಿಹಿತವಾಗಿದೆ ಎಂದು ಬುಧವಾರ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಫರೂಕ್ ಅಬ್ದುಲ್ಲಾ ಭಾವಾವೇಶದಿಂದ ನುಡಿದರು. ವಿಧಾನಸಭೆ ಮುಂಭಾಗದಲ್ಲಿ ಕಾರ್ ಬಾಂಬ್ಗೆ ಸಿಕ್ಕು ಜೀವ ತೆತ್ತ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತ ಅವರು ಮಾತನಾಡುತ್ತಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವೆ ಕಾಶ್ಮೀರ ಕೊಳ್ಳದ ಜನತೆ ಸ್ಯಾಂಡ್ವಿಚ್ ಆಗಿದ್ದಾರೆ. ಒಂದು ದೇಶ ಅಮಾಯಕರನ್ನು ಗುರಿಯಾಗಿಸಿಕೊಂಡು ಆಟವಾಡುತ್ತಿದ್ದರೆ ಮತ್ತೊಂದು ದೇಶ ಪ್ರೇಕ್ಷಕನ ಸ್ಥಾನದಲ್ಲಿದೆ ಎಂದು ಅಬ್ದುಲ್ಲಾ ನೊಂದು ನುಡಿದರು. ವಾಷಿಂಗ್ಟನ್ ಹಾಗೂ ನ್ಯೂಯಾರ್ಕ್ಗಳಲ್ಲಿ ದಾಳಿ ನಡೆದ ನಂತರ ಪ್ರತೀಕಾರಕ್ಕಾಗಿ ಅಮೆರಿಕಾ ಒಂದು ದಿನವೂ ತಡ ಮಾಡದೆ ತನ್ನ ಸೇನೆಗಳನ್ನು ಸಿದ್ಧಪಡಿಸಿದರೆ, ನಾವು 12 ವರ್ಷಗಳಿಂದಲೂ ಕಾಯುತ್ತಲೇ ಇದ್ದೇವೆ ಎಂದು ಫರೂಕ್ ವ್ಯಂಗ್ಯವಾಡಿದರು.
ನನ್ನ ಸಾವಿನಿಂದಾಗಿ ಭಯೋತ್ಪಾದಕರು ಲಾಭ ಪಡೆಯುವಂತಿದ್ದರೆ, ನಾನು ಗಡಿಗೆ ತೆರಳಲು ಸಿದ್ಧನಿದ್ದೇನೆ. ನನ್ನನ್ನು ಅವರು ಶೂಟ್ ಮಾಡಲಿ. ಆದರೆ, ಅಮಾಯಕ ಜನತೆಗೆ ಶಾಂತಿಯಿಂದ ಬಾಳಲು ಅವಕಾಶ ಮಾಡಿಕೊಡಲಿ ಎಂದು ಫರೂಕ್ ಅಬ್ದುಲ್ಲಾ ಹೇಳಿದರು.
(ಪಿಟಿಐ)