ಬೆಂಗಳೂರು, ಮಂಗಳೂರು, ಕೋಲಾರ ಜನತೆಯನ್ನು ನಡುಗಿಸಿದ ಭೂಮಿ
ಬೆಂಗಳೂರು : ರಾಜ್ಯದ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳು, ಮಂಗಳೂರು, ಕೋಲಾರಗಳಲ್ಲಿ ಮಂಗಳವಾರ ರಾತ್ರಿ ಭೂಕಂಪ ಸಂಭವಿಸಿದೆ. ಆಂಧ್ರ ಪ್ರದೇಶ, ತಮಿಳುನಾಡು, ಮಾಹಾರಾಷ್ಟ್ರ, ಕೇರಳ ಹಾಗೂ ಪುದುಚೇರಿಯಲ್ಲೂ ಭೂಕಂಪ ಸಂಭವಿಸಿದೆ. ಆದರೆ, ಯಾವ ಪ್ರದೇಶದಿಂದಲೂ ಸಾವು ನೋವಿನ ವರದಿಯಾಗಿಲ್ಲ .
ಬೆಂಗಳೂರಿನ ಮಲ್ಲೇಶ್ವರ, ಕೆ.ಪಿ.ಅಗ್ರಹಾರ, ಪದ್ಮನಾಭನಗರ, ಬನಶಂಕರಿ, ವಿಲ್ಸನ್ ಗಾರ್ಡನ್, ಹನುಮಂತ ನಗರ, ಸಿ.ವಿ.ರಾಮನ್ ನಗರ, ಸಂಜಯನಗರ, ಮಹಾತ್ಮಗಾಂಧಿ ರಸ್ತೆ, ತಾವರೆಕೆರೆ, ಐಟಿಐ ಕಾಲೊನಿ, ಹೆಸರಘಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಾತ್ರಿ 8.45 ರ ವೇಳೆಯಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಗೌರಿಬಿದನೂರಿನ ನೈರುತ್ಯ ದಿಕ್ಕಿಗೆ 260 ಕಿಮೀ ದೂರದಲ್ಲಿತ್ತು ಎಂದು ಭಾಬಾ ಅಣು ಸಂಶೋಧನಾ ಕೇಂದ್ರದ ಮೂಲಗಳು ತಿಳಿಸಿವೆ.
ವಿಧಾನಸೌಧದಲ್ಲೂ ಭೂಕಂಪದ ಅನುಭವ ಕಂಡು ಬಂದಿದೆ. ಭೂಮಿ ನಡುಗಿದ್ದರಿಂದ ಭಯಭೀತರಾದ ಜನ ಕಟ್ಟಡಗಳಿಂದ ಹೊರಬಂದು ರಸ್ತೆಗಳಲ್ಲಿ ಆಶ್ರಯಪಡೆದಿದ್ದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟಿತ್ತು ಎಂದು ಭಾಬಾ ಕೇಂದ್ರದ ಮೂಲಗಳು ತಿಳಿಸಿದ್ದರೆ, ನವದೆಹಲಿಯ ಭಾರತೀಯ ಹವಾಮಾನ ಇಲಾಖೆ ಈ ಕಂಪನ 5.8 ರಷ್ಟಿತ್ತು ಎಂದಿದೆ.
(ಇನ್ಫೋ ವಾರ್ತೆ)