ಸಿಲಿಕಾನ್ ನಗರಿಯ 200 ಉದ್ಯಾನಗಳ ಅಭಿವೃದ್ಧಿಗೆ ಮುಂದಾದ ಪಾಲಿಕೆ
ಬೆಂಗಳೂರು: ರಾಜಧಾನಿಯ 200 ಉದ್ಯಾನಗಳನ್ನು ಬರುವ ವರ್ಷವೊಂದರಲ್ಲಿ ಬೆಂಗಳೂರು ಮಹಾ ನಗರ ಪಾಲಿಕೆ ಅಭಿವೃದ್ಧಿ ಪಡಿಸಲಿದೆ. ಉಳಿದ 400 ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ವಹಿಸಿಕೊಡಲು ಪಾಲಿಕೆ ಉದ್ದೇಶಿಸಿದೆ.
ಕಾಟನ್ಪೇಟೆ ವಾರ್ಡ್ ನಂ. 29 ಕ್ಕೆ ಸೇರಿದ ಪ್ರದೇಶದಲ್ಲಿ ಹೊಸತಾಗಿ ಅಭಿವೃದ್ಧಿಪಡಿಸಿದ ಮುನಿಯಣ್ಣ ಉದ್ಯಾನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಿದ್ದ ಮೇಯರ್ ಪ್ರೇಮಾ ಕಾರ್ಯಪ್ಪ ಈ ವಿಷಯ ತಿಳಿಸಿದರು.
ರಸ್ತೆ ವಿಭಜಕಗಳು, ವೃತ್ತಗಳು ಹಾಗೂ ಜಂಕ್ಷನ್ಗಳು ಮತ್ತು ಟ್ರಾಫಿಕ್ ಐಲ್ಯಾಂಡ್ಗಳ ನಿರ್ವಹಣೆಯನ್ನು ಕೂಡ ಖಾಸಗಿಯವರಿಗೆ ವಹಿಸಿಕೊಡಲು ಉದ್ದೇಶಿಸಲಾಗಿದೆ. ಅಲಸೂರು, ಮಡಿವಾಳ, ಯಡಿಯೂರು ಸೇರಿದಂತೆ ರಾಜಧಾನಿಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಕೂಡ ಪಾಲಿಕೆ ಉದ್ದೇಶಿಸಿದೆ ಎಂದು ಮೇಯರ್ ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಎಸ್.ಶಿವಪ್ಪ , ಶಾಸಕ ಪಿ.ಸಿ.ಮೋಹನ್, ಕಾರ್ಪೊರೇಟರ್ ಬಿ.ವಿ.ಗಣೇಶ್ ಮುಂತಾದವರು ಹಾಜರಿದ್ದರು.
(ಇನ್ಫೋ ವಾರ್ತೆ)