ವಣೇನೂರು ಯರ್ರಮ್ಮಳ ವಿರುದ್ಧ ಮೋಕಾಪೊಲೀಸ್ ಠಾಣೆಗೆ ದೂರು
ಬಳ್ಳಾರಿ : ಇಲ್ಲಿನ ವಣೆನೂರು ಪ್ರಕರಣಕ್ಕೆ ಕಾರಣಳಾಗಿದ್ದ ಯರ್ರಮ್ಮಳ ವಿರುದ್ಧ ಬಾಲಕಿಯಾಬ್ಬಳು ಕೇಸು ದಾಖಲಿಸುವುದರೊಂದಿಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ವಾಲ್ಮೀಕಿ ಜನಾಂಗಕ್ಕೆ ಸೇರಿದ ಹುಡುಗಿಯು ಹರಿಜನ ಹುಡುಗನಂದಿಗೆ ಪರಾರಿಯಾಗಲು ಸಹಕರಿಸಿದ್ದಾಳೆ ಎಂಬ ಆರೋಪದ ಮೇಲೆ ಯರ್ರಮ್ಮ ನಗ್ನ ಮೆರವಣಿಗೆಯ ಅನಾಚಾರಕ್ಕೆ ತುತ್ತಾಗಿದ್ದಳು. ಆದರೆ ಪ್ರಸ್ತುತ ದಾಖಲಾಗಿರುವ ದೂರಿನ ಪ್ರಕಾರ ಹುಡುಗಿ ಮರಿಲಿಂಗಮ್ಮ ಎಂಬಾಕೆ ಇನ್ನೂ ಪ್ರಾಯಕ್ಕೆ ಬಂದಿಲ್ಲ. ಕೇಶಪ್ಪ ಎಂಬಾತ ಅವಳನ್ನು ಅಪಹರಿಸಿ ಅತ್ಯಾಚಾರ ನಡೆಸಿರುವುದು ಅಪರಾಧವಾಗಿದ್ದು, ಈ ಪ್ರಕರಣಕ್ಕೆ ಯರ್ರಮ್ಮ ಸೇರಿದಂತೆ ಇತರ ಐದು ಮಂದಿ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮರಿಲಿಂಗಮ್ಮ ನೀಡಿರುವ ಈ ದೂರು ಮೋಕಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ. ಪಿ. ಪುಟ್ಟ ಸ್ವಾಮಿ ತಿಳಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಇತರ ಹೆಸರುಗಳು- ರಾಮಲಿಂಗಪ್ಪ, ಹುಲಿಗಪ್ಪ, ಸುಂಕಪ್ಪ ಮತ್ತು ಇನ್ನೊಬ್ಬ ಹುಲಿಗಪ್ಪ. ಈ ಪ್ರಕರಣದಲ್ಲಿ ಯರ್ರಮ್ಮಳನ್ನು ಪ್ರಮುಖ ಆರೋಪಿ ಎಂದು ದೂರಿನಲ್ಲಿ ಹೇಳಲಾಗಿದೆ.
(ಇನ್ಫೋ ವಾರ್ತೆ)