ಬೆಂಗಳೂರು ವಿವಿಯಲ್ಲಿರುವ ಹಸ್ತಪ್ರತಿಗಳ ಸಿಡಿ ರೂಪಾಂತರಕ್ಕೆ ನಿರ್ಧಾರ
ಬೆಂಗಳೂರು : ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವನ್ನು ಆಧುನೀಕರಣಗೊಳಿಸುವುದರೊಂದಿಗೆ ಕಂಪ್ಯೂಟರೀಕರಣಗೊಳಿಸಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ವಿಷಯವನ್ನು ಬೆಂಗಳೂರು ವಿ.ವಿ. ಉಪ ಕುಲಪತಿ ಡಾ.ಕೆ. ಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಮೂರು ಹಂತಗಳಲ್ಲಿ ಈ ವಿಭಾಗವನ್ನು ನವೀಕರಿಸಿ, ಆಧುನೀಕರಣಗೊಳಿಸಿ, ಕಂಪ್ಯೂಟರೀಕರಣಗೊಳಿಸಲಾಗುವುದು. ಈ ಕಾರ್ಯಕ್ಕಾಗಿ ಸರಕಾರದಿಂದ 12 ಲಕ್ಷ ರುಪಾಯಿ ಹಾಗೂ ವಿಶ್ವಸಂಸ್ಥೆಯಿಂದಲೂ ನೆರವು ಕೋರಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರವು 1971ರಿಂದ ಹಸ್ತಪ್ರತಿಗಳ ಸಂಗ್ರಹದಲ್ಲಿ ತೊಡಗಿತು. ಮೊದಲು ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ತಮ್ಮಲ್ಲಿದ್ದ 30 ಹಸ್ತಪ್ರತಿಗಳನ್ನು ಕೊಟ್ಟು ಈ ಕಾರ್ಯಕ್ಕೆ ಚಾಲನೆ ನೀಡಿದರು. ಈಗ ಅಧ್ಯಯನ ಕೇಂದ್ರದಲ್ಲಿ 1700 ಓಲೆಗರಿಗಳು, 2500ಕ್ಕೂ ಹೆಚ್ಚು ಕೃತಿಗಳಿವೆ ಎಂದು ಹೇಳಿದರು.
ಓಲೆಗರಿಗಳಲ್ಲಿ ಸಂಸ್ಕೃತ, ಕನ್ನಡ, ಪ್ರಾಕೃತ, ತೆಲುಗು ಹಾಗೂ ತಮಿಳು ಭಾಷೆಯ ಕೃತಿಗಳಿವೆ. ಇವನ್ನು ಭಾಷಾಂತರಗೊಳಿಸಲಾಗುವುದು ಮತ್ತು ಮೂಲಕ್ಕೆ ಚ್ಯುತಿಯಾಗದ ರೀತಿಯಲ್ಲಿ ಸ್ಕ್ಯಾನ್ ಮಾಡಿ ಸಿ.ಡಿ.ಗಳಾಗಿ ಪರಿವರ್ತಿಸಲಾಗುವುದು ಎಂದರು.
ಜಾನಪದ ಪೀಠ : ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ವಸ್ತು ಸಂಗ್ರಹಾಲಯ ಹಾಗೂ ಅಧ್ಯಯನ ಪೀಠ ಸ್ಥಾಪಿಸಲು ಬೆಂಗಳೂರು ವಿ.ವಿ. ಉದ್ದೇಶಿಸಿದೆ ಎಂದು ಡಾ. ಸಿದ್ದಪ್ಪ, ಪ್ರಾಚೀನ ಹಸ್ತಪ್ರತಿಗಳು ಯಾರ ಬಳಿಯಾದರೂ ಇದ್ದರೆ ಅದನ್ನು ವಿ.ವಿ.ಗೆ ಒಪ್ಪಿಸುವಂತೆ ಮನವಿ ಮಾಡಿದರು.