ಕೊಡಗು: ಮನೆಗೆ ಬೀಗ ಹಾಕಿ ಹೊರಡುವ ಮುನ್ನ ಪೊಲೀಸರಿಗೆ ತಿಳಿಸಿ!
ಮಡಿಕೇರಿ: ಕ್ರೆೃಂ ಕಂಟ್ರೋಲ್ ವಿಷಯ ಕೊಡಗು ಜಿಲ್ಲೆಯಲ್ಲಿ ಚುರುಕಾಗಿದೆ. ಕೊಡಗಿನ ಪೊಲೀಸರು ಜಿಲ್ಲೆಯ ನಾಗರಿಕರಿಗೆ ಪಾಲಿಸಬೇಕಾದ ಒಂದಷ್ಟು ನಿಯಮಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಕಾಫಿ ಮತ್ತಿತರ ಹೆಚ್ಚು ಬೆಲೆ ಬಾಳುವ ಬೆಳೆ ಬೆಳೆಯುವ ಕೃಷಿಕರು ಕಡ್ಡಾಯವಾಗಿ ಬ್ಯಾಂಕ್ ಲಾಕರ್ಗಳನ್ನು ತೆರೆದು ಹಣ ಮತ್ತು ನಗಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಮನೆಗೆ ಬೀಗ ಹಾಕಿ ಹೊರಗೆ ಹೊರಡುವ ಮುನ್ನ ಆ ಪ್ರದೇಶದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು.
ಮನೆಯ ಬಾಗಿಲುಗಳಿಗೆ ಪುಟ್ಟ ಮಸೂರವನ್ನು ಅಳವಡಿಸಿ, ಬಾಗಿಲು ತೆಗೆಯುವ ಮುನ್ನ ಬಂದಿರುವ ವ್ಯಕ್ತಿ ಯಾರೆಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಕಾಫೀ ಎಸ್ಟೇಟ್ಗಳಿಗೆ ಉದ್ಯೋಗಿಗಳನ್ನು ಸೇರಿಸಿಕೊಳ್ಳುವಾಗ ಅವರ ಬಗ್ಗೆ ಖಚಿತ ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ಅಪರಿಚಿತ ವ್ಯಕ್ತಿಗಳೊಡನೆ ಅತಿ ಜಾಗರೂಕತೆಯಿಂದ ವ್ಯವಹರಿಸಬೇಕು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಗನ್ ಬಳಸಲು ನಾಗರಿಕರಿಗೆ ಅನುಮತಿ ನೀಡಲಾಗಿದೆ.
ತಮ್ಮ ಮನೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವಾಗ ಸ್ಟಿಯರಿಂಗ್ ಲಾಕ್ ಅಥವಾ ಕ್ವಾರ್ಟರ್ ಗ್ಲಾಸ್ ಲಾಕ್ಗಳನ್ನು ಬಳಸಲು ನಾಗರಿಕರಿಗೆ ಪೊಲೀಸರು ಸಲಹೆ ಮಾಡಿದ್ದಾರೆ.ಯಾವುದೇ ಅಗತ್ಯ ಸಂದರ್ಭದಲ್ಲಿ 100 ಮತ್ತು 28330 ಫೋನ್ ನಂಬರ್ಗಳನ್ನು ಸಂಪರ್ಕಿಸಬಹುದು. ಅಥವಾ ಮನೆ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)