ದಸರಾ ಉತ್ಸವಕ್ಕೆ ಮೆರುಗು ತರಲಿದೆ‘ಶ್ರೀರಂಗಪಟ್ಟಣ ಕಾವೇರಿಉತ್ಸವ’
ನವದೆಹಲಿ : ಈ ವರ್ಷದ ದಸರಾ ಆಚರಣೆಯ ಅಂಗವಾಗಿ ‘ಸಿಂಧು ಉತ್ಸವ’ದ ಮಾದರಿಯಲ್ಲಿಯೇ ‘ಕಾವೇರಿ ಉತ್ಸವ’ವನ್ನು ಶ್ರೀರಂಗಪಟ್ಟಣದಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಮಾನಸ ಸರೋವರ ಯಾತ್ರಿಗಳ ತಂಡವನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದ ಪ್ರಸಿದ್ಧ ದಸರಾ ಹಬ್ಬದ ಸಂದರ್ಭದಲ್ಲಿ ಉದ್ದೇಶಿತ ಕಾವೇರಿ ಉತ್ಸವವನ್ನು ಶ್ರೀರಂಗ ಪಟ್ಟಣದಲ್ಲಿ ನಡೆಸಲಾಗುವುದು. ಇದೇ ಮಾದರಿಯಲ್ಲಿ ಬರುವ ವರ್ಷ ನರ್ಮದಾ ಉತ್ಸವವನ್ನೂ ನಡೆಸುವ ಉದ್ದೇಶ ಇಲಾಖೆಗಿದೆ. ದೇಶದ ಎರಡು ಪವಿತ್ರ ಹಾಗೂ ಪ್ರಸಿದ್ಧ ನದಿಗಳ ಗೌರವಾರ್ಥ ನಡೆಯುವ ಉತ್ಸವಗಳ ಮೂಲಕ ನದಿ ದಂಡೆ ಪ್ರದೇಶದ ಶ್ರೀಮಂತ ಸಂಸ್ಕೃತಿಯ ಪರಿಚಯ ದೇಶಕ್ಕಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಮಾನಸ ಸರೋವರ, ಅಮರನಾಥ ಸೇರಿದಂತೆ ದೇಶದ ಮುಖ್ಯ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸುವ ಯಾತ್ರಿಗಳಿಗೆ ವೀಸಾ ಮತ್ತಿತರ ವಿಷಯಗಳಲ್ಲಿ ಸಹಕರಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಸಚಿವಾಲಯದ ವತಿಯಿಂದ ‘ಭಾರತ ತೀರ್ಥ ಯಾತ್ರಾ ವಿಕಾಸ ಮಂಡಲ’ವನ್ನು ಆರಂಭಿಸಲಾಗುವುದು ಎಂದು ಅನಂತಕುಮಾರ್ ಹೇಳಿದರು.
(ಇನ್ಫೋ ವಾರ್ತೆ)