ಪ್ರತಿ ದಿನ ಭಾರತದ 200 ಹೆಣ್ಣು ಮಕ್ಕಳು ವೇಶ್ಯಾವೃತ್ತಿಗೆ ಸೇರ್ಪಡೆ!
ನವ ದೆಹಲಿ : ಪ್ರತಿ ದಿನ 200 ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಭೂಕಂಪ ಮೊದಲಾದ ದುರಂತ ಪೀಡಿತ ಪ್ರದೇಶಗಳಿಗೆ ಸೇರಿದವರು ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ದ ಅಧ್ಯಕ್ಷೆ ವಿಭಾ ಪಾರ್ಥಸಾರಥಿ ತಿಳಿಸಿದ್ದಾರೆ. ಮಕ್ಕಳ ಕೊಡು- ಕೊಳ್ಳುವಿಕೆ ಕುರಿತ ರಾಷ್ಟ್ರೀಯ ಸಲಹಾ ಸಮಾವೇಶದಲ್ಲಿ ಗುರುವಾರ ಅವರು ಮಾತಾಡುತ್ತಿದ್ದರು.
ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ಜೆಡಬ್ಲ್ಯುಪಿ ಹಾಗೂ ಯೂನಿಫೆಮ್ ಜಂಟಿಯಾಗಿ ಎರಡು ದಿನಗಳ ಕಾಲದ ಈ ಸಮಾವೇಶ ಆಯೋಜಿಸಿದ್ದು, ಗುರುವಾರ ಸಮ್ಮೇಳನ ಪ್ರಾರಂಭವಾಯಿತು. ಗ್ರಾಹಕರನ್ನು ಆಕರ್ಷಿಸಲು ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಪ್ರಭಾವಿತರಾಗುವ ಮಕ್ಕಳು ಅವನ್ನು ಕೊಳ್ಳಲು ಸುಲಭವಾಗಿ ಹಣ ಸಂಪಾದಿಸುವ ಮಾರ್ಗ ಹಿಡಿಯುತ್ತಾರೆ. ಈ ಸುಲಭ ಮಾರ್ಗ ಪಾರ್ಟ್ಟೈಂ ಸೂಳೆಗಾರಿಕೆ ! ಪ್ರವಾಸೋದ್ಯಮದ ಬೆಳವಣಿಗೆಯೂ ಮನರಂಜನೆ ಸೊಂಟದ ಕೆಳಗಿನ ಮಟ್ಟ ಮೀರುವಂತೆ ಮಾಡಿದೆ. ವೇಶ್ಯಾವಾಟಿಕೆ ವ್ಯಾಪಕವಾಗಲು ಇದೂ ಒಂದು ಕಾರಣ ಎಂದು ವಿಭಾ ಹೇಳಿದರು.
ಸಮಾವೇಶದ ಅದ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್ಎಚ್ಆರ್ಸಿ) ದ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಮಾತನಾಡಿ, ಮಕ್ಕಳ ಹಿತರಕ್ಷಣೆಗೆ ಕಾನೂನಾತ್ಮಕ ಸವಲತ್ತುಗಳಿದ್ದರೂ, ರಾಜಕೀಯವಾಗಿ ಅವನ್ನು ಯಶಸ್ವಿಯಾಗಿ ಅನುಷ್ಟಾನಕ್ಕೆ ತರದಿರುವುದೇ ಮಕ್ಕಳ ಶೋಷಣೆಗೆ ಕಾರಣವಾಗಿದೆ ಎಂದರು.
ಜೆಡಬ್ಲ್ಯುಪಿ ನಿರ್ದೇಶಕಿ ಜ್ಯೋತ್ಸಾ ಚಟರ್ಜಿ ದೇಶದ ವಿವಿಧೆಡೆಗಳಲ್ಲಿ ವೇಶ್ಯಾವಾಟಿಕೆಯ ಪರಿಪರಿಯನ್ನು ಅಂಕಿ- ಅಂಶಗಳ ಮೂಲಕ ತಿಳಿಸಿದ್ದು ಹೀಗೆ-
- ದತ್ತು ತೆಗೆದುಕೊಂಡು, ಹೆಣ್ಣು ಮಕ್ಕಳನ್ನು ಸೂಳೆಗಾರಿಕೆಗೆ ಎಳೆದಿರುವ ಪ್ರಕರಣಗಳು ಒಟ್ಟು ಪ್ರತಿಶತ 40
- ಮುಂಬಯಿಯ ಅಡ್ಡಾಗಳಲ್ಲಿ ಇರುವ ದೇವದಾಸಿಯರು 15- 20 ಪ್ರತಿಶತ
- ನಾಗಪುರ, ದೆಹಲಿ ಹಾಗೂ ಹೈದರಾಬಾದ್ನ ಕರೆವೆಣ್ಣುಗಳಲ್ಲಿ ಪ್ರತಿಶತ 50 ದೇವದಾಸಿಯರು
- ಬೆಳಗಾಂ ಜಿಲ್ಲೆಯಲ್ಲಿ 80 ಪ್ರತಿಶತ ದೇವದಾಸಿಯರಿದ್ದಾರೆ !
- ಮಾನಭಂಗಕ್ಕೀಡಾಗುವ ಪ್ರತಿಶತ 5 ರಷ್ಟು ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಇಳಿಯುತ್ತಾರೆ
- 8 ಪ್ರತಿಶತ ಹೆಂಗಸರು ಲೈಂಗಿಕ ತೃಷೆ ತೀರಿಸಿಕೊಳ್ಳಲು ಈ ಮಾರ್ಗ ಹಿಡಿಯುತ್ತಾರೆ
- 5 ಪ್ರತಿಶತ ದಲಿತರು ಹಾಗೂ ಆರ್ಥಿಕ ಸಮಸ್ಯೆಗೆ ತುತ್ತಾದವರು ಈ ಕೆಲಸ ಮಾಡುತ್ತಾರೆ